ರಾಯಚೂರು: ಹಂದಿಗಳು ಕಳವಾದ ವಿಷಯಕ್ಕೆ ನಡೆದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಅಶೋಕ್ ಡಿಪೊ ಹತ್ತಿರ ಮಂಗಳವಾರ ನಡೆದಿದೆ.
ತಿಮ್ಮಾಪೂರಪೇಟೆ ಬಡಾವಣೆಯ ನಾರಾಯಣ(22) ಕೊಲೆಯಾದವರು. ಹಂದಿಯನ್ನು ಕಳ್ಳತನ ಮಾಡಿದ್ದಾರೆ ಎಂಬ ಸಂಶಯದಿಂದ ದೊಡ್ಡ ಲಕ್ಷ್ಮಣ ಅವರ ಗುಂಪು ರಾಡ್ ಹಾಗೂ ಕಟ್ಟಿಗೆಗಳಿಂದ ಹಲ್ಲೆ ನಡೆಸಿ ಕೊಲೆಗೈದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಮಾಹಿತಿ ಪಡೆದ ನಾರಾಯಣ ಕುಟುಂಬದವರು ಆಕ್ರೋಶದಿಂದ ದೊಡ್ಡ ಲಕ್ಷ್ಮಣ ಕುಟುಂಬದವರ ಮೇಲೆ ಹಲ್ಲೆ ಮುಂದಾದ ಘಟನೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿ ದೊಡ್ಡ ಲಕ್ಷ್ಮಣ ಸೇರಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಬೈಕ್ಗೆ ಬೆಂಕಿ ಹಚ್ಚಲಾಗಿದೆ ಎನ್ನಲಾಗಿದ್ದು, ಬೈಕ್ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.