ರಾಯಚೂರು: ಆಶಾ ಕಾರ್ಯಕರ್ತೆಯರಿಗೆ ಬಾಕಿ ಪ್ರೋತ್ಸಾಹಧನ ಹಾಗೂ ಫಿಕ್ಸ್ ವೇತನ ಕೂಡಲೇ ಪಾವತಿ ಮಾಡಬೇಕು. ಲಸಿಕೆ ಹಾಕುವುದು ಹಾಗೂ ಕೋವಿಡ್ ಕಾರ್ಯಗಳ ಗುರಿ ಸಾಧಿಸಲು ಒತ್ತಡ ಹೇರಬಾರದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ( ಎಐಯುಟಿಯುಸಿ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಲು ಬಳಸುವ ಆಶಾ ಸ್ಟಾಫ್ ವೇತನ ಮಾದರಿಯಿಂದಾಗಿ ಪ್ರತಿತಿಂಗಳ ಸರಿಯಾಗಿ ವೇತನ ಸಿಗುತ್ತಿಲ್ಲ. ಕಳೆದ 3 ವರ್ಷಗಳಿಂದ ಹೊಸ ವೇತನ ವಿಧಾನ ಬದಲಾವಣೆ ಮಾಡುವುದರಿಂದ ಸಮಸ್ಯೆಯಾಗುತ್ತಿದೆ ಈ ಹಿಂದೆ ಗ್ರಾಮ ಪಂಚಾಯಿತಿ ಹಾಗೂ ಮಸ್ಕಿ ಉಪ ಚುನಾವಣೆಯಲ್ಲಿ ಮತದಾನ ಪೂರ್ವ ತರಬೇತಿ ಹಾಗೂ ಇತರೆ ಚಟುವಟಿಕೆಗಳ ಭತ್ಯೆ ನೀಡಿಲ್ಲ ಎಂದು ದೂರಿದರು.
ಕೊವಿಡ್ ಲಸಿಕೆಕರಣಕ್ಕೆ ಗುರಿ ನೀಡುವುದರಿಂದ ಆಶಾ ಕಾರ್ಯಕರ್ತೆಯರಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಕೂಡಲೇ ಇಲಾಖೆ ಮುಖ್ಯಸ್ಥರ ಜೊತೆ ಕುಂದುಕೊರತೆ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವೀರೇಶ ಎನ್. ಎಸ್. ಕಾರ್ಯದರ್ಶಿ ಈರಮ್ಮ, ಮಹೇಶ ಚೀಲಕಪರ್ವಿ, ಪ್ರಭಾವತಿ, ಲಕ್ಷ್ಮೀ, ಮಲ್ಲಮ್ಮ, ಸಂಧ್ಯಾ, ಸುಜಾತ, ಸಾಜಿದಾ ಇದ್ದರು.