ರಾಯಚೂರು:ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಸಂತ್ರಸ್ತರಿಗೆ ನೆರವು ಒದಗಿಸಲು ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏಕಾಚಕ್ರಾಧಿಪತಿ ಆಡಳಿತ ನಡೆಸುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಿಡಿಕಾರಿದರು.
ತಾಲ್ಲೂಕಿನ ಕೃಷ್ಣಾನದಿ ಪ್ರವಾಹ ಪೀಡಿತ ಗ್ರಾಮಗಳಿಗೆ ಶುಕ್ರವಾರ ಭೇಟಿಗಾಗಿ ತೆರಳುವ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರವಾಹ ಮತ್ತು ಬರಗಾಲದಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಸರ್ಕಾರ ರಚನೆಯಾಗಿ ಎರಡು ವಾರಗಳಾದರೂ ಸಚಿವ ಸಂಪುಟ ರಚಿಸಿಲ್ಲ. ಸಚಿವರಿಲ್ಲದೆ ಎಲ್ಲ ಅಧಿಕಾರವನ್ನು ಮುಖ್ಯಮಂತ್ರಿಗಳೇ ಚಲಾಯಿಸುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರವಾಹ ಆಗಿದ್ದು ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ’ಪ್ರಹ್ಲಾದ ಜೋಶಿ ಅವರು ಇಂದ್ರ ಲೋಕದಲ್ಲಿದ್ದು, ಗಾಳಿಯಲ್ಲಿ ಹಾರಾಡ್ತೀದ್ದಾರೆ. ಹೀಗಾಗಿ ಮಾಹಿತಿಯ ಕೊರತೆ ಆಗಿದೆ ಅವರಿಗೆ’ ಎಂದು ವ್ಯಂಗ್ಯವಾಡಿದರು.