ರಾಯಚೂರು: ಕೊರೊನಾ ಸೋಂಕು ಪತ್ತೆಯಾಗಿದ್ದರಿಂದ ಚಿಕಿತ್ಸೆ ಪಡೆಯುವುದಕ್ಕಾಗಿ ಒಪೆಕ್ ಆಸ್ಪತ್ರೆಗೆ ದಾಖಲಿಸಲಾಗಿರುವ 133 ಜನರ ಪೈಕಿ, ಗುಣಮುಖವಾಗಿರುವ 34 ಜನರನ್ನು ಭಾನುವಾರ ಬಿಡುಗಡೆ ಮಾಡಲಾಯಿತು.
ಗುಣಮುಖರಾದವರು 14 ದಿನಗಳವರೆಗೆ ‘ಹೋಂ ಕ್ವಾರಂಟೈನ್’ನಲ್ಲಿ ಇರಬೇಕು ಎಂದು ಸೂಚಿಸಲಾಗಿದೆ.
ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಸೇರಿದಂತೆ ವಿವಿಧ ಅಧಿಕಾರಿಗಳು, ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದವರ ಮೇಲೆ ಪುಷ್ಪವೃಷ್ಟಿ ಮಾಡಿ ಶುಭ ಹಾರೈಸಿದರು.
ಮೇ 17, 18 ಮತ್ತು 19 ರಂದು ಕೋವಿಡ್ ದೃಢ ವರದಿ ಆಧರಿಸಿ ಇವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಡುಗಡೆಯಾದವರು ರಾಯಚೂರಿನ ಆಟೊನಗರ, ಮಡ್ಡಿಪೇಟೆ, ದೇವದುರ್ಗ ತಾಲ್ಲೂಕಿನ ಮಸರಕಲ್ ಗ್ರಾಮದವರು.
ಪ್ರಯೋಗಾಲಯ ಉದ್ಘಾಟನೆ
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಿರುವ ಆರ್ಟಿಪಿಸಿಆರ್ ಪ್ರಯೋಗಾಲಯವನ್ನು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಉದ್ಘಾಟಿಸಿದರು. ಕೋವಿಡ್ ಪರೀಕ್ಷೆಗಳು ಇನ್ನು ಮುಂದೆ ರಾಯಚೂರಿನಲ್ಲಿಯೂ ಮಾಡಲಾಗುವುದು. ಭಾನುವಾರ 96 ಸ್ಯಾಂಪಲ್ಗಳನ್ನು ಪರೀಕ್ಷೆಗಾಗಿ ನೀಡಲಾಗಿದ್ದು, ಸಂಜೆ ವರದಿ ಸಿಗಲಿದೆ ಎಂದು ತಿಳಿಸಿದರು.