ರಾಯಚೂರು: ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದಮಾಜಿ ನಕ್ಸಲ್ ಹೋರಾಟಗಾರ ನರಸಿಂಹಮೂರ್ತಿ ದೊಡ್ಡಿಪಾಳ್ಯ ಬುಧವಾರ ಜಾಮೀನಿನ ಮೇಲೆ ಬಿಡುಗಡೆಗೊಂಡರು.
18 ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಪೊಲೀಸರು ಕಳೆದ ವರ್ಷ ಅಕ್ಟೋಬರ್ 24ರಂದು ಇವರನ್ನು ಬಂಧಿಸಿದ್ದರು.ಹೆಚ್ಚುವರಿ ಜೆಎಂಎಫ್ಸಿ–3 ನ್ಯಾಯಾಲಯ ಇವರಿಗೆ ಜಾಮೀನು ಮಂಜೂರು ಮಾಡಿತ್ತು.
ಜಿಲ್ಲಾ ಕಾರಾಗೃಹದ ಎದುರು ಸೇರಿದ್ದ ಬೆಂಬಲಿಗರು ಹೂಮಾಲೆ ಹಾಕಿ, ಪ್ರಜಾಪ್ರಭುತ್ವದ ಪರ ಘೋಷಣೆಗಳನ್ನು ಕೂಗಿ ನರಸಿಂದಹಮೂರ್ತಿ ಅವರನ್ನು ಸ್ವಾಗತಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ನರಸಿಂಹಮೂರ್ತಿ, ‘ನನ್ನನ್ನು ಬಂಧಿಸುವ ಮೂಲಕ ಹೋರಾಟದ ದನಿ ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ಸಂಘಟಿತ ಅಪರಾಧಿಗಳು ಇಂದು ಸರ್ಕಾರ ನಡೆಸುತ್ತಿದ್ದು, ಈ ರೀತಿ ದಮನಕಾರಿ ಪ್ರಯತ್ನದಿಂದ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಬಡವರ ಪರ ಹೋರಾಟ ಮುಂದುವರಿಸುತ್ತೇವೆ’ ಎಂದರು.