ರಾಯಚೂರು: ಇಲ್ಲಿನ ಕೆಇಬಿ ಕಾಲೊನಿಯಲ್ಲಿನ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆಗೆ ತಲುಪಿದೆ. ಕೇವಲ ಹತ್ತು ವರ್ಷಗಳ ಹಿಂದೆ ನಿರ್ಮಿಸಿದ ಈ ಶಾಲೆ ಬೀಳುವ ಹಂತ ತಲುಪಿದೆ. ಶಾಲಾ ಕೊಠಡಿಯೊಳಗಿನ ನೆಲಹಾಸು ಉಬ್ಬಿ ನಿಂತಿದೆ, ಚಾವಣಿಯ ಸಿಮೆಂಟ್ ನಿರಂತರವಾಗಿ ಕಳಚಿ ಬೀಳಲಾರಂಭಿಸಿದೆ. ಇದರಿಂದ ವಿದ್ಯಾರ್ಥಿಗಳು ಜೀವಭಯದಲ್ಲೇ ಪಾಠ ಆಲಿಸಬೇಕಿದೆ.
ಜಿಲ್ಲಾಧಿಕಾರಿ ನಿವಾಸದ ಮುಂದೆಯೇ ಈ ಕಾಲನಿ ಇದೆ. ಶಾಲೆಯ ಕಾರಿಡಾರ್ನಲ್ಲಿ ಚಾವಣಿಯ ಸಿಮೆಂಟ್ ಕಳಚಿ ಬೀಳುತ್ತಿದೆ. ಅಪಾಯದ ಮುನ್ಸೂಚನೆ ಅರಿತ ಶಿಕ್ಷಕರು, ಮಕ್ಕಳು ಕಾರಿಡಾರ್ನಲ್ಲಿ ಓಡಾಡದಂತೆ ಹಗ್ಗ ಹಾಗೂ ತಂತಿ ಕಟ್ಟಿದ್ದಾರೆ. ಮಕ್ಕಳು ಅಪಾಯ ಲೆಕ್ಕಿಸದೇ ನೆರಳಿಗಾಗಿ ಕಾರಿಡಾರ್ನಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಇಲ್ಲಿ ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಬಯಲು ರಂಗ ಮಂದಿರದಂಥ ಸ್ಥಳದಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷಕರು ಪಾಠ ಬೋಧನೆ ಮಾಡುತ್ತಿದ್ದಾರೆ. ಜೋರಾಗಿ ಗಾಳಿ ಬೀಸಿದರೆ ತಕ್ಷಣ ದೂಳು ಆವರಿಸಿಕೊಳ್ಳುತ್ತಿದೆ. ಮಕ್ಕಳು ಪಾಠ ಆಲಿಸುವುದು ಕಷ್ಟವಾಗುತ್ತಿದೆ. ಮಕ್ಕಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಶಾಲೆಯಲ್ಲಿ ಒಟ್ಟು 228 ವಿದ್ಯಾರ್ಥಿಗಳು ಹಾಗೂ 10 ಶಿಕ್ಷಕರಿದ್ದಾರೆ. ಬಡ ಕೂಲಿ ಕಾರ್ಮಿಕರ ಮಕ್ಕಳೇ ಅಧಿಕ ಸಂಖ್ಯೆಯಲ್ಲಿದ್ದಾರೆ.
‘ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೇ ಶಾಲೆಯ ದುಸ್ಥಿತಿ ಬಗ್ಗೆ ಲಿಖಿತ ದೂರುಕೊಟ್ಟಿದ್ದೇವೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಬಡ ಕುಟುಂಬದ ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಮಕ್ಕಳ ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿರುವ ಕುರಿತು ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆಯಲಾಗಿದೆ. ಹಳೆಯ ಕಟ್ಟಡ ನೆಲಸಮಗೊಳಿಸಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ. ನಮ್ಮ ಹಂತದಲ್ಲಿ ಸಾಧ್ಯವಿರುವ ಪ್ರಯತ್ನ ಮಾಡಿದ್ದೇನೆಹೀರಾಲಾಲ್ ಮುಖ್ಯ ಶಿಕ್ಷಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.