ಕವಿತಾಳ: ‘ಆಶಾಕಿರಣ ಯೋಜನೆಯ ಮೊದಲ ಹಂತದಲ್ಲಿ ದೃಷ್ಟಿದೋಷ ಇರುವವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಎರಡನೇ ಹಂತದಲ್ಲಿ ಕಣ್ಣಿನ ಪರೀಕ್ಷೆ ನಡೆಸಲಾಗುವುದು’ ಎಂದು ನೇತ್ರಾಧಿಕಾರಿ ಯಲ್ಲಪ್ಪ ಹೇಳಿದರು.
ಸಮೀಪದ ಹಾಲಾಪುರ ಗ್ರಾಮದಲ್ಲಿ ಸೋಮವಾರ ನಡೆದ ನೇತ್ರ ತಪಾಸಣೆ ಶಿಬಿರದಲ್ಲಿ ಮಾತನಾಡಿ,‘ನೇತ್ರ ತಪಾಸಣೆಯ ಮಾಹಿತಿಯನ್ನು ಆನ್ಲೈನ್ನಲ್ಲಿ ದಾಖಲಿಸಲಾಗುತ್ತದೆ. ದೃಷ್ಟಿದೋಷ ಕಂಡುಬಂದಲ್ಲಿ ಅವರ ವಿಳಾಸಕ್ಕೆ ಕನ್ನಡಕ ಕಳುಹಿಸಲಾಗುತ್ತದೆ. ಕ್ಯಾಟರಾಕ್ಟ್ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ ಅಗತ್ಯ ಕಂಡುಬಂದಲ್ಲಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರಗಳಲ್ಲಿ ಶಸ್ತ್ರಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.
ಡಾ.ಶಿವಪ್ಪ, ಹಿರಿಯ ಆರೋಗ್ಯ ಸಹಾಯಕ ಅಧಿಕಾರಿ ಸುಧೀರಬಾಬು, ಕಿರಿಯ ಆರೋಗ್ಯ ಸಹಾಯಕ ಶ್ರೀನಿವಾಸ, ಸುಮಾ, ಸುಜಾತ ಮತ್ತು ಸುಮಂಗಲಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.