ಕವಿತಾಳ: ‘ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ’ ಎಂದು ಮುಖ್ಯಾಧಿಕಾರಿ ಜೆ.ಟಿ.ರೆಡ್ಡಿ ಹೇಳಿದರು.
ಪಟ್ಟಣದಲ್ಲಿ ರಾಸಾಯನಿಕ ಸಿಂಪಡಣೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಿದ್ದರೂ ಸಾರ್ವಜನಿಕರು ಅನಗತ್ಯವಾಗಿ ಓಡಾಡುತ್ತಿರುವುದು ಕಂಡು ಬರುತ್ತಿದೆ. ತುರ್ತು ಕೆಲಸ ಹೊರತುಪಡಿಸಿ ಅನಗತ್ಯ ಹೊರಗೆ ಬರಬಾರದು. ಮಾಸ್ಕ್ ಧರಿಸುವುದು ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೊವಿಡ್ ನಿಯಮಗಳನ್ನು ಪಾಲಿಸಬೇಕು’ ಎಂದರು.
‘ನೆಗಡಿ, ಜ್ವರ, ಮತ್ತು ಉಸಿರಾಟದ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು. ಕೊರೊನಾ ಬಗ್ಗೆ ಭಯ ಪಡದೆ ಮುಂಜಾಗ್ರತೆ ವಹಿಸಬೇಕು ಮತ್ತು ಲಸಿಕೆ ಪಡೆಯಬೇಕು’ ಎಂದು ಡಾ.ಅಮೃತ ರಾಠೋಡ್ ಅವರು ಹೇಳಿದರು.
ಸಬ್ಇನ್ಸ್ಪೆಕ್ಟರ್ ಎಂ.ವೆಂಕಟೇಶ, ಪಟ್ಟಣ ಪಂಚಾಯಿತಿ ಸದಸ್ಯರಾದ ಎಚ್.ಬಸವರಾಜ, ಮೌನೇಶ ಹಿರೇಕುರಬರ್ ಇದ್ದರು. ಆನ್ವರಿ ಕ್ರಾಸ್, ಹಳೇ ಬಸ್ ನಿಲ್ದಾಣ, ತೊಪ್ಪಲದೊಡ್ಡಿ ಅಗಸಿ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಯಿತು.