ಮಾನ್ವಿ: ತಾಲ್ಲೂಕಿನ ಉಟಕನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಡಕಲ್ ಮತ್ತು ಉದ್ಬಾಳ ಗ್ರಾಮಗಳ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಅಧಿಕಾರಿಗಳು ಹಾಗೂ ಕೂಲಿಕಾರ್ಮಿಕರು ಶನಿವಾರ ಕಾರ್ಮಿಕರ ದಿನ ಆಚರಿಸಿದರು.
ಸಹಾಯಕ ನಿರ್ದೇಶಕ ಚೆನ್ನಾರೆಡ್ಡಿ ಮಾತನಾಡಿ,‘ಕಾರ್ಮಿಕರು ಕಾಮಗಾರಿ ಸ್ಥಳದಲ್ಲಿ ಕೋವಿಡ್ ಮುಂಜಾಗ್ರತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು’ ಎಂದು ಸಲಹೆ ನೀಡಿದರು.
‘ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಸಂದರ್ಭದಲ್ಲಿ ಕೂಲಿಕಾರ್ಮಿಕರಿಗೆ ಕೆಲಸ ನೀಡಬೇಕಾಗಿದೆ. ನರೇಗಾ ಯೋಜನೆ ಅಡಿ ಕೈಗೊಳ್ಳುವ ಕಾಮಗಾರಿಗಳ ಸದುಪಯೋಗ ಪಡೆಯಬೇಕು’ ಎಂದರು.