ರಾಯಚೂರು: ಮಸ್ಕಿ ಉಪಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕ್ಷೇತ್ರದ ವ್ಯಾಪ್ತಿಯ ಬೆಂಚಿಮರಡಿ, ತುರ್ವಿಹಾಳ, ಗುಂಡಾ ಗ್ರಾಮಗಳಲ್ಲಿ ಕಾಂಗ್ರೆಸ್– ಬಿಜೆಪಿ ಕಾರ್ಯಕರ್ತರ ಮಧ್ಯೆ ಜಗಳ, ಹೊಡೆದಾಡಿಕೊಂಡಿರುವ ಪ್ರಕರಣಗಳಾಗಿವೆ.
ಬಿಜೆಪಿ ಕಾರ್ಯಕರ್ತರ ಮನೆಗಳ ಎದುರು ಪಟಾಕಿ ಸಿಡಿಸಿದ್ದಲ್ಲದೆ ಘೋಷಣೆ ಕೂಗಿರುವುದು ಪರಿಸ್ಥಿತಿ ಹದಗೆಡಲು ಕಾರಣ ಎನ್ನಲಾಗಿದೆ. ಗುಂಡಾ ಗ್ರಾಮದಲ್ಲಿ ಬಿಜೆಪಿಯ ಅಮರೇಶ ಅಮರಣ್ಣ, ಗಣೇಶ ತಿರುಪತೆಪ್ಪ, ಅಮರೇಶ ಹನುಮಂತ ಮತ್ತು ಗಂಗಪ್ಪ ಕಬೀರಪ್ಪ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ತುರ್ವಿಹಾಳ ಮತ್ತು ಕವಿತಾಳ ಠಾಣೆ ಪೊಲೀಸರು ಗಾಯಾಳುಗಳಿಂದ ಹೇಳಿಕೆ ಪಡೆದಿದ್ದು, ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ಮಾಜಿ ಶಾಸಕ ಪ್ರತಾಪಗೌಡ ಅವರು ಭೇಟಿಮಾಡಿದರು.
‘ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಗೆದ್ದ ತಕ್ಷಣವೇ ಕಾಂಗ್ರೆಸ್ನವರು ಹಲವು ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದರು.