ಲಿಂಗಸುಗೂರು: ಇಲ್ಲಿಯ ಪುರಸಭೆಗೆ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಸದಸ್ಯರು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರಿ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ನಾಲ್ವರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ನಿಂದ ಪುರಸಭೆಗೆ ಆಯ್ಕೆಯಾಗಿರುವ ಸದಸ್ಯರ ಪೈಕಿ ಫಾತಿಮಾ ಮೌಲಾಸಾಬ, ಮೌಲಾಸಾಬ ಚೋಟುಸಾಬ ಗೌಳಿ, ಎ. ಪ್ರಮೋದಕುಮಾರ ವಸಂತಮಾಧವರಾವ್, ಶರಣಪ್ಪ ಬಸಪ್ಪ ಕೆಂಗೇರಿ ಪಕ್ಷ ವಿರೋಧಿ ಕೃತ್ಯ ಎಸಗಿದ್ದಾರೆ ಎಂದು ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ 2023 ಜೂನ್ 2ರಂದು ಜಿಲ್ಲಾಧಿಕಾರಿಗೆ ದಾಖಲೆಗಳ ಸಹಿತ ದೂರು ಕೊಟ್ಟಿದ್ದರು.
ಪುರಸಭೆ ಸದಸ್ಯರಿಗೆ ನೋಟಿಸ್ ನೀಡಿ ದೂರುಗಳಿಗೆ ಸಂಬಂಧಿಸಿ ಸಮರ್ಥನೀಯವಾದ ಉತ್ತರ ನೀಡಲು ಅವಕಾಶ ನೀಡಲಾಗಿತ್ತು. ನಾ ಲ್ವರು ಸದಸ್ಯರು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರಿದ ಸುದ್ದಿ ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಸದಸ್ಯರು ಜಿಲ್ಲಾಧಿಕಾರಿಗೆ ನೋಟಿಸ್ಗೆ ಸಮರ್ಥ ಉತ್ತರ ನೀಡುವಲ್ಲಿ ವಿಫಲವಾಗಿದ್ದರು.
ಕರ್ನಾಟಕ ಸ್ಥಳೀಯ ಪ್ರಧಿಕಾರಗಳ (ಪಕ್ಷಾಂತರ ನಿಷೇಧ) ಕಾಯ್ದೆ 1987ರ ನಿಯಮದಡಿ ಲಿಂಗಸುಗೂರು ಪುರಸಭೆಯ ನಾಲ್ವರ ಸದಸ್ಯರ ಉಳಿದ ಅವಧಿಯ ಸದಸ್ಯತ್ವ ಅನರ್ಹಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.