ಲಿಂಗಸುಗೂರು: ಪಟ್ಟಣವು ರಾಜ್ಯ, ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಳವಾಗಿ ಮಾರ್ಪಟ್ಟಿದ್ದರಿಂದ ವಾಹನಗಳ ದಟ್ಟನೆ ನಿಯಂತ್ರಣವು ಸವಾಲಾಗಿ ಪರಿಣಮಿಸಿದೆ.
ಬಸವಸಾಗರ, ಗಡಿಯಾರ, ಅಂಚೆ ಕಚೇರಿ, ಬಸ್ ನಿಲ್ದಾಣ ವೃತ್ತ ಹಾಗೂ ವೃತ್ತಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಅಡ್ಡಾದಿಡ್ಡಿ ವಾಹನಗಳ ನಿಲುಗಡೆ ಸಾಮಾನ್ಯನೋಟ.
ಪ್ರಮುಖ ರಸ್ತೆಗಳ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ರಾಜಕೀಯ, ಅಧಿಕಾರಿಗಳ ದರ್ಪ ಮನೋಭಾವನೆಗಳಿಂದ ರಸ್ತೆ ಇಕ್ಕಟ್ಟಾಗಿವೆ. ಇರುವ ರಸ್ತೆಗುಂಟ ಬೀದಿ ವ್ಯಾಪಾರಿಗಳು ಹಾಗೂ ಪ್ರತಿಷ್ಠಿತರ ಅತಿಕ್ರಮಣ ಪುರಸಭೆ ಮತ್ತು ಪೊಲೀಸ್ ಇಲಾಖೆಗೆ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಹೋಗಿದೆ ಎಂಬುದು ಸಮಾಜ ಸೇವಕರ ಆರೋಪ.
ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ‘ರಸ್ತೆ ವಿಸ್ತರಣೆ ಕಾರ್ಯಕ್ಕೆ ಈಗಾಗಲೆ ವಿವಿಧ ಇಲಾಖೆ ಸಹಯೋಗದಲ್ಲಿ ಚಾಲನೆ ನೀಡಲಾಗಿತ್ತು. ಕೆಲವರು ಕೋರ್ಟ್ ಮೆಟ್ಟಿಲೇರಿದ್ದರಿಂದ ಸ್ವಲ್ಪ ವಿಳಂಬವಾಗಿದೆ. ಸಾಧ್ಯವಾದಷ್ಟು ಟ್ರಾಫಿಕ್ ದಟ್ಟನೆ ಆಗದಂತೆ ಎಚ್ಚರಿಕೆ ಕ್ರಮಗಳನ್ನು ಪುರಸಭೆ ಕೈಗೊಳ್ಳುತ್ತಿದೆ’ ಎಂದು ತಿಳಿಸಿದರು.
‘ಪೊಲೀಸ್ ಇಲಾಖೆ ಬಸ್ ನಿಲ್ದಾಣ ವೃತ್ತದಲ್ಲಿ ಸಂಚಾರಿ ವೃತ್ತ ನಿರ್ಮಿಸಿ, ಧ್ವನಿವರ್ಧಕ ಮೂಲಕ ವಾಹನ ಅಡ್ಡಾದಿಡ್ಡಿ ನಿಲುಗಡೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಎಚ್ಚರಿಕೆ ನೀಡಿದ್ದೇವೆ’ ಎಂದು ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ತಿಳಿಸಿದರು.