ಸಿಂಧನೂರು: ತಾಲ್ಲೂಕಿನ ಬೂದಿವಾಳ ಕ್ಯಾಂಪಿನ ಸರ್ವೆ ನಂ.71ರ ಸರ್ಕಾರಿ ಭೂಮಿಯಲ್ಲಿ ವಸತಿ ಮತ್ತು ನಿವೇಶನ ಹಕ್ಕುಪತ್ರಕ್ಕಾಗಿ ಕರ್ನಾಟಕ ರೈತ ಸಂಘ ತಾಲ್ಲೂಕು ಘಟಕದ ನೇತೃತ್ವದಲ್ಲಿ 120 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ ಗಮನ ಹರಿಸಿಲ್ಲ. ಈಗಲೂ ನಿರ್ಲಕ್ಷ್ಯ ವಹಿಸಿದರೆ ಡಿ.30 ರಂದು ಸಿಂಧನೂರಿನಲ್ಲಿ ನಡೆಯುವ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡುವುದಾಗಿ ಕೆಆರ್ಎಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಬೂದಿವಾಳ ಕ್ಯಾಂಪಿನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಗುರುವಾರ ಮಾತನಾಡಿದರು.
‘ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸೋಮಲಾಪುರ ಗ್ರಾಮ ಪಂಚಾಯಿತಿ ಪಿಡಿಒ ಅವರು ಎರಡು ಗ್ರಾಮ ಸಭೆ ನಡೆಸಿದ್ದಾರೆ. ಮೊದಲನೇ ಗ್ರಾಮಸಭೆಯು ಗ್ರಾಮಸ್ಥರ ಅಸಹಕಾರದಿಂದ ರದ್ದುಗೊಂಡಿತ್ತು. ಎರಡನೇ ಬಾರಿಗೆ ನಡೆದ ಗ್ರಾಮ ಸಭೆಯಲ್ಲಿ 81 ನಿವೇಶನಗಳ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲಾಗಿದೆ. ಆದರೂ ಅಧಿಕಾರಿಗಳು ಹಕ್ಕುಪತ್ರ ಹಂಚಿಕೆ ಮಾಡಲು ವಿಳಂಬ ಮಾಡುತ್ತಿದ್ದಾರೆ. ತಾಲ್ಲೂಕು ಹಾಗೂ ಜಿಲ್ಲಾ ಆಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಹಕ್ಕುಪತ್ರ ಹಂಚಿಕೆ ಮಾಡಲು ಮುಂದಾಗಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳ ಕ್ಯಾಂಪ್, ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್ ಪಾಟೀಲ್ ಬೇರಿಗಿ, ಮುಖಂಡರಾದ ನಾಗಪ್ಪ, ಮಲ್ಲಪ್ಪ, ಪರಶುರಾಮ, ರೇಣುಕಮ್ಮ, ನೀಲಮ್ಮ, ಮುನ್ನಿ, ಕಾಸಿಂಬಿ, ಅಂಬಮ್ಮ, ಹಂಪಮ್ಮ, ನಾಗಮ್ಮ, ಮಾರಮ್ಮ, ಚಂದ್ರಮ್ಮ, ಲಕ್ಷ್ಮಿ ಇದ್ದರು.