ಸೋಲೂರು (ಮಾಗಡಿ): ಹಸು, ರೇಷ್ಮೆಯಿಂದ ರೈತರು ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಳ್ಳಲು ಮುಂದಾಗಬೇಕು ಎಂದು ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು. ಆಲೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಗುಣಮಟ್ಟದ ಹಾಲನ್ನು ಡೈರಿಗೆ ಹಾಕಿ, ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘಗಳಿದ್ದರೆ ಆ ಗ್ರಾಮಗಳು ಅಭಿವೃದ್ಧಿ ಹೊಂದಲು ಸಹಕಾರಿ. ಆಲೂರು ಹಾಲು ಉತ್ಪಾದಕರ ಸಂಘದ ಅಭಿವೃದ್ಧಿಗೆ ಸಹಕಾರ ಅಗತ್ಯ. ಡೈರಿಯಲ್ಲಿ ಹಾಲು ಉತ್ಪಾದಕರಿಗೆ ಸರಿಯಾಗಿ ಹಣ ಬಟವಾಡೆ ಮಾಡಬೇಕು. ಡೈರಿ ಕಾರ್ಯದರ್ಶಿಗಳು ರೈತರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದರು.
ತಾಲ್ಲೂಕಿನಲ್ಲಿ 274 ಹಾಲು ಉತ್ಪಾದಕರ ಸಂಘಗಳಿವೆ. ಮುಂದಿನ ವರ್ಷದ ಒಳಗೆ ಡೈರಿಯ ಸರ್ವಸದಸ್ಯರು ಸಭೆ ನಡೆಸಲು ಸಭಾಭವನ ನಿರ್ಮಿಸಲು ₹1.50 ಲಕ್ಷ ನೀಡಲಾಗುತ್ತದೆ ಎಂದು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ನಾಜಿಯಾ ಖಾನಂ ಜವಾಹರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಗೀತಾ ಗಂಗರಂಗಯ್ಯ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ.ಅರುಣ್ ಕುಮಾರ್, ಬಾಣವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ನಾಗರಾಜು ಇದ್ದರು.