ಕುದೂರು (ರಾಮನಗರ): ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಅಡಿಕೆ ಮರಗಳನ್ನು ಕಡಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮಾಗಡಿ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ನಡೆದಿದೆ. ದ್ವೇಷದ ಕಾರಣಕ್ಕಾಗಿ ಗ್ರಾಮದ ಪ್ರಕಾಶ್ ಎಂಬತಾ, ಗೋವಿಂದರಾಜು ಎಂಬುವರಿಗೆ ಸೇರಿದ ಸುಮಾರು 8 ವರ್ಷದ ಅಡಿಕೆ ಮರಗಳು ನಾಶ ಮಾಡಿದ್ದಾನೆ.
ಗ್ರಾಮದ ಸರ್ವೇ ನಂಬರ್ 33/7ರಲ್ಲಿ ಗೋವಿಂದರಾಜು ಅವರು ಜಮೀನು ಹೊಂದಿದ್ದರು. ಪಕ್ಕದಲ್ಲಿ ಸಿದ್ದಗಂಗಮ್ಮ ಅವರ ಜಮೀನಿತ್ತು. ಭೂಮಿ ಒತ್ತುವರಿ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದಿತ್ತು. ಗೋವಿಂದಾಜು ಅವರು ಸರ್ವೇ ಮಾಡಿಸಿದಾಗ 3 ಗುಂಟೆ ಒತ್ತುವರಿಯಾಗಿರುವುದು ಗೊತ್ತಾಗಿತ್ತು.
ಇದೇ ವಿಷಯ ಮಾಗಡಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಜ. 21ರಂದು ಜಮೀನಿಗೆ ಬಂದ ಸಿದ್ದಗಂಗಮ್ಮ ಅವರ ಕುಟುಂಬದ ಪ್ರಕಾಶ್ ಫಸಲು ಬಿಡುವ ಅಡಕೆ ಮರಗಳನ್ನು ಕತ್ತಿಯಿಂದ ಕಡಿದು ಹಾಕಿದ್ದಾನೆ. ಘಟನೆ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.