‘ವೇತನ ಬಿಡುಗಡೆ ಮಾಡಿಸಲು ಹಲವರಿಗೆ ಹಣ ಕೊಟ್ಟಿರುವೆ’
‘ಒಂಬತ್ತು ವರ್ಷಗಳಿಂದ ಕಾರ್ಮಿಕ ಕೋರ್ಟ್ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ನಾನು ಅಲೆದಿದ್ದರಿಂದ ನೌಕರರ ಬಾಕಿ ವೇತನ ಬಿಡುಗಡೆಯಾಗಿದೆ. ಅದಕ್ಕಾಗಿ ಸುಮಾರು ₹9 ಲಕ್ಷ ಖರ್ಚಾಗಿದ್ದು ಹಲವರಿಗೆ ಹಣ ಕೊಟ್ಟಿದ್ದೇನೆ. ಅವರ ಹೆಸರನ್ನು ನಾನಿಲ್ಲಿ ಹೇಳಲಾಗದು. ನನ್ನ ಶ್ರಮಕ್ಕಾಗಿ ನೌಕರರೇ ಮಾತನಾಡಿಕೊಂಡು ನನಗೆ ಹಣ ಕೊಡಲು ಮುಂದಾಗಿದ್ದಾರೆ. ಆದರೆ ವೇತನ ಬಿಡುಗಡೆ ಮಾಡಿದ್ದಕ್ಕೆ ಪ್ರತಿಯಾಗಿ ಪ್ರತಿ ನೌಕರರ ಬಾಕಿ ವೇತನದಲ್ಲಿ ಶೇ 15ರಷ್ಟು ಕಮಿಷನ್ ಸಂಗ್ರಹಿಸಿದ್ದೇನೆ ಎಂಬುದು ಸುಳ್ಳು’ ಎಂದು ವಾಟರ್ಮ್ಯಾನ್ ಶಿವಕುಮಾರ್ (ಮಾಯಣ್ಣ) ದೇವರ ಫೋಟೊ ಮೇಲೆ ಕೈ ಇಟ್ಟು ಪ್ರಮಾಣ ಮಾಡಿದರು. ‘ನೌಕರರ ಕುಟುಂಬದ ಮಹಿಳೆ ಜೊತೆ ನಡೆಸಿರುವ ಮೊಬೈಲ್ ಸಂಭಾಷಣೆಯ ಆಡಿಯೊ ಮತ್ತು ಹಣದ ಕವರ್ ಪಡೆಯುತ್ತಿರುವ ಫೋಟೊ ನನ್ನದೇ. ನೌಕರನಿಗೆ ಹಿಂದೆ ನಾನು ಕೊಟ್ಟಿದ್ದ ₹1 ಲಕ್ಷ ಸಾಲವನ್ನು ಹಿಂದಿರುಗಿಸಿದಾಗ ಸಾಕ್ಷಿಗಾಗಿ ಫೋಟೊ ತೆಗೆದುಕೊಂಡಿದ್ದಾರೆ. ಪುರಸಭೆ ಸದಸ್ಯ ಉಮೇಶ್ ಅವರ ಹೆಸರು ಹೇಳಿದರೆ ಹೆದರಿಕೊಂಡು ಸಾಲ ಬೇಗ ಕೊಡುತ್ತಾರೆಂದು ಮೊಬೈಲ್ನಲ್ಲಿ ಮಾತನಾಡುವಾಗ ಅವರ ಹೆಸರು ಹೇಳಿದ್ದೇನೆ. ಈ ವಿಷಯದಲ್ಲಿ ನನ್ನದೇನೂ ತಪ್ಪಿಲ್ಲ’ ಎಂದರು. ಅವರ ಮಾತಿಗೆ ಮೊಬೈಲ್ನಲ್ಲಿ ಮಾತನಾಡಿದ್ದ ಮಹಿಳೆ ಸಹ ದನಿಗೂಡಿಸಿದರು.