ಮಾಗಡಿ: ತಾಲ್ಲೂಕಿನ ಕಣ್ಣೂರು ಮಕ್ಕಳ ದೇವರ ಮಠ ಪ್ರಾಚೀನ ವೀರಶೈವ ಮಠವಾಗಿದೆ. ಕಾಯಕ ಯೋಗಿಗಳಾಗಿ ಜೀವಂತ ಸಮಾಧಿಯಾಗಿರುವಸ್ವಾಮೀಜಿಯೊಬ್ಬರು ಬಳಸಿದ್ದ ಪೂಜಾ ಸಾಮಗ್ರಿಗಳು ಇಲ್ಲಿ ಲಭಿಸಿವೆ ಎಂದು ಇತಿಹಾಸ ಸಂಶೋಧಕ ಪ್ರಾಧ್ಯಾಪಕ ಡಾ.ಪರಮಶಿವಮೂರ್ತಿ ತಿಳಿಸಿದರು.
ಮಾಗಡಿ ತಾಲ್ಲೂಕಿನ ಕಣ್ಣೂರು ಮಕ್ಕಳ ದೇವರ ಮಠದ ಹೊಲದ ಗುಹೆಯಲ್ಲಿ ದೊರೆತ ಕಂಚುಮುಟ್ಟಿನ ಪೂಜಾ ಸಾಮಗ್ರಿಗಳನ್ನು ಇತಿಹಾಸ ಸಂಶೋಧಕರು ಪರಿಶೀಲಿಸಿದರು
ಕಣ್ಣೂರು ಮಕ್ಕಳ ದೇವರ ಮಠಕ್ಕೆ ಭಾನುವಾರ ಭೇಟಿ ನೀಡಿ ಹೊಲದಲ್ಲಿ ದೊರೆತ ಪೂಜಾ ಸಾಮಗ್ರಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಕರ್ನಾಟಕದ ಮಠಗಳಲ್ಲಿ ಕಣ್ಣೂರು ಮಕ್ಕಳ ದೇವರ ಮಠಕ್ಕೆ 300 ವರ್ಷಗಳ ಇತಿಹಾಸವಿದೆ. ದೊರೆತಿರುವ ಅಪರೂಪದ ಪೂಜಾ ಸಾಮಗ್ರಿಗಳನ್ನು ಪರಿಶೀಲಿಸಲಾಗಿದೆ. ಸಮ ಸಮಾಜ ನಿರ್ಮಾಣಕ್ಕೆ ಶ್ರಮಸಿದ್ದ ಕಾಯಕಯೋಗಿ ಸ್ವಾಮೀಜಿಯೊಬ್ಬರು ಧಾರ್ಮಿಕ, ಆಧ್ಯಾತ್ಮಿಕ, ಶರಣರ ಸತ್ಯದ ಸಂದೇಶ ಬಿತ್ತಿದ್ದಾರೆ. ಅವರು ಜೀವಂತ ಸಮಾಧಿಯಾಗಿರುವ ಕುರುಹುಗಳಿವೆ ಎಂದರು.
ಇತಿಹಾಸ ಸಂಶೋಧಕರಾದ ಡಾ.ನಂಜುಂಡಸ್ವಾಮಿ, ಡಾ.ನಾಗೇಶ್ ಎಚ್.ಎ. ಹನುಮಾಪುರ ಮಾತನಾಡಿದರು. ಮಠಾಧೀಶ ಮುತ್ಯುಂಜಯ ಸ್ವಾಮೀಜಿ, ಪತ್ರಕರ್ತ ಮಲ್ಲಿಗೆ ಜಗದೀಶ್, ಸಂಸ್ಕೃತ ಶಿಕ್ಷಕ ರಾಜಣ್ಣ, ಕಣ್ಣೂರಿನ ಸಂಸ್ಕೃತಿ ಚಿಂತಕ ಚಂದ್ರಣ್ಣ, ಗ್ರಾ.ಪಂ. ಅಧ್ಯಕ್ಷ ಕೆ.ಎಸ್. ಜಗದೀಶ್ ಹಾಜರಿದ್ದರು.