ನಿರಂತರ ಮಳೆಯಿಂದಾಗಿ ಚನ್ನಪಟ್ಟಣ ತಾಲ್ಲೂಕಿನ ಹತ್ತಾರು ಕೆರೆಗಳು ಕೋಡಿ ತುಂಬಿ ಹರಿದಿದ್ದು, ಸೇತುವೆಗಳ ಮೇಲೆ ನೀರು ಹರಿಯತೊಡಗಿದೆ. ಕೆಲವು ಕಡೆಗಳಲ್ಲಿ ಕಚ್ಚಾ ರಸ್ತೆಗಳ ಮೇಲ್ಮೈ ಕೊಚ್ಚಿ ಹೋಗಿದ್ದು ಜನರ ಸಂಚಾರಕ್ಕೆ ತೊಂದರೆ ಆಗಿದೆ. ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಅರ್ಕಾವತಿ ನದಿಗೆ ನೀರು ಬಿಡಲಾಗುತ್ತಿದೆ. ಇದರಿಂದ ರಾಮನಗರ ತಾಲ್ಲೂಕಿನ ಗದಗಯ್ಯನದೊಡ್ಡಿ ಬಳಿ ಸೇತುವೆ ಕೊಚ್ಚಿ ಹೋಗಿದ್ದು, ಓಡಾಟಕ್ಕೆ ತೊಂದರೆ ಆಗಿದೆ.