ಕನಕಪುರ: ಬರಗಾಲ ಪ್ರದೇಶವೆಂದು ಕನಕಪುರ ತಾಲ್ಲೂಕನ್ನು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ಮಂಗಳವಾರ ಕನಕಪುರಕ್ಕೆ ಭೇಟಿ ನೀಡಿ ಕೃಷಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ರೈತರು ತಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆದಿದ್ದಾರೆ ಎಂದು ಪಹಣಿಯಲ್ಲಿ ನಮೂದಿಸಿ ರೈತರ ಅನುಕೂಲಕ್ಕಾಗಿ ಪ್ರತಿಯೊಬ್ಬ ರೈತರಿಗೆ ಪ್ರತ್ಯೇಕವಾಗಿ ಫ್ರೂಟ್ ಐಡಿ ಅನ್ನು ಕೊಡಲಾಗುತ್ತಿದೆ. ಫ್ರೂಟ್ ಐಡಿಯಿಂದ ರೈತರು ನೇರವಾಗಿ ಬರಗಾಲದ ಬೆಳೆ ಪರಿಹಾರ, ಬೆಳೆ ವಿಮೆ, ರಾಗಿ ಖರೀದಿಗೆ ಬಳಸಬಹುದಾಗಿದೆ ಎಂದರು.
ಫ್ರೂಟ್ ಐಡಿ ಪರಿಶೀಲಿಸಿದ ಡಾ. ಅವಿನಾಶ್ ಅವರು ಚಿಕ್ಕಮುದುವಾಡಿ ಗ್ರಾಮದಲ್ಲಿ ರೈತರನ್ನು ಭೇಟಿ ಮಾಡಿ ಕೃಷಿ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ, ಎಷ್ಟು ಪ್ರಗತಿ ಆಗಿದೆ ಎಂದು ರೈತರಿಂದ ಮಾಹಿತಿ ಪಡೆದುಕೊಂಡರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಅಂಬಿಕಾ, ಉಪ ಕೃಷಿ ನಿರ್ದೇಶಕ ಉಮೇಶ್, ತಶೀಲ್ದಾರ್ ಡಾ.ಸ್ಮಿತಾ ರಾಮ್, ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ರಾಧಾಕೃಷ್ಣ, ಕಂದಾಯ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.