ಕನಕಪುರ: ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮರಿಲಿಂಗೇಗೌಡ ತಮ್ಮ ಬೆಂಬಲಿಗರೊಂದಿಗೆ ಶನಿವಾರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ತಾಲ್ಲೂಕಿನ ಹನುಮಂತನಗರದ ಮರಿಲಿಂಗೇಗೌಡ ಅವರ ನಿವಾಸದಲ್ಲಿಯೇ ಸಚಿವ ಜೈಶಂಕರ್ ಅವರನ್ನು ಬಿಜೆಪಿಗೆ ಬರ ಮಾಡಿಕೊಂಡರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್ನಲ್ಲಿ ಹಲವು ವರ್ಷ ದುಡಿದಿದ್ದೇವೆ. ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಅಧಿಕಾರ ಕೊಟ್ಟು, ಶಕ್ತಿ ತುಂಬುವ ಕೆಲಸ ಮಾಡಲಿಲ್ಲ. ಪಕ್ಷ ಸಂಘಟನೆಗೂ ಒತ್ತು ನೀಡಲಿಲ್ಲ’ ಎಂದು ದೂರಿದರು.
‘ಈ ನೋವು ನನ್ನೊಬ್ಬನದಲ್ಲ. ಇಡಿ ರಾಜ್ಯದಲ್ಲಿನ ಕಾರ್ಯಕರ್ತರದ್ದು’ ಎಂದರು.
‘ಬಿಜೆಪಿ ನನ್ನ ಮಗನನ್ನು ನಾಲ್ಕೈದು ತಿಂಗಳಲ್ಲಿ ಗುರುತಿಸಿ ಕ್ಯಾಬಿನೆಟ್ ದರ್ಜೆಯ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿದೆ. ನನ್ನ ಮಗನಿಗೆ ಅಧಿಕಾರ ಕೊಟ್ಟಿದೆ ಎಂದು ಹೇಳುತ್ತಿಲ್ಲ. ಆ ಪಕ್ಷ ನಮ್ಮನ್ನು ಗುರುತಿಸಿದೆ. ಆದರೆ ಜೆಡಿಎಸ್ ತನ್ನ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡಲಿಲ್ಲ ಎಂಬ ಬೇಸರ ಕಾಡುತ್ತಿದೆ’ ಎಂದರು.
ಸದಸ್ಯ ಹೆಬ್ಬಿದರುಮೆಟ್ಟಿಲು ಈರೇಗೌಡ, ಸೋಮಸುಂದರ್, ಬಮೂಲ್ ಮಾಜಿ ನಿರ್ದೇಶಕ ಮರಿಗೌಡ, ಗೋದೂರ್ ಶಿವಣ್ಣ, ನಿವೃತ್ತ ಪೊಲೀಸ್ ಅಧಿಕಾರಿ ಮುನಿಯಪ್ಪ, ಹೈಕೋರ್ಟ್ ವಕೀಲ ರಾಜಣ್ಣ ಹಾಜರಿದ್ದರು.