ಮಾಗಡಿ (ರಾಮನಗರ): ‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುಂದಾಗಿರುವ ಜೆಡಿಎಸ್ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡ ತಮ್ಮ ಮನೆ ಅಳಿಯನನ್ನು ಹರಕೆ ಕುರಿ ಮಾಡಲು ಹೊರಟಿದ್ದಾರೆ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ವ್ಯಂಗ್ಯವಾಡಿದ್ದಾರೆ.
ಪಟ್ಟಣದ ಕೋಟೆ ಮೈದಾನದಲ್ಲಿ ತಾಲ್ಲೂಕು ಆಡಳಿತ ಗುರುವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕ್ಷೇತ್ರದಲ್ಲಿ ಈಗಾಗಲೇ ದೇವೇಗೌಡರು ಒಮ್ಮೆ ಮತ್ತು ಕುಮಾರಸ್ವಾಮಿ ಅವರು ಎರಡು ಸಲ ಗೆದ್ದಿದ್ದರೂ, ಮಂಜುನಾಥ್ ಅವರನ್ನು ತಮ್ಮ ಪಕ್ಷದಿಂದಲೇ ನಿಲ್ಲಿಸಲು ಅವರಿಗೆ ಧೈರ್ಯವಿಲ್ಲವಾಗಿದೆ. ಜೆಡಿಎಸ್ ಎಷ್ಟೊಂದು ದುರ್ಬಲವಾಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದು ವ್ಯಂಗ್ಯವಾಡಿದರು.
‘ವೈದ್ಯರಾದ ಮಂಜುನಾಥ್ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ರಾಜಕಾರಣ ಆಪರೇಷನ್ ಮಾಡಿದ ಹಾಗಲ್ಲ. ಯಾರು ಯಾವ ಕಸುಬು ಮಾಡಬೇಕೊ ಅದನ್ನು ಮಾಡಿದರೆ ಮಾತ್ರ ಗೌರವ. ಅದು ಬಿಟ್ಟು ಬೇರೆ ಕೆಲಸ ಮಾಡಲು ಬಂದರೆ ಯಶಸ್ಸು ಸಿಗುವುದಿಲ್ಲ’ ಎಂದು ಹೇಳಿದರು.
‘ನಮಗೆ ಬಲಿಷ್ಠ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ ಇದ್ದಾರೆ. ಅವರನ್ನು ಎದುರಿಸಲಾಗದೆ ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಓಡಿ ಹೋಗಲು ಸಿದ್ಧತೆ ನಡೆಸಿದ್ದಾರೆ. ಸಿ.ಪಿ. ಯೋಗೇಶ್ವರ್ ಕೂಡ ಸ್ಪರ್ಧಿಸಲು ಹೆದರುತ್ತಿದ್ದಾರೆ. ಅವರು ಇವರನ್ನು ಮತ್ತು ಇವರು ಅವರನ್ನು ಮುಂದಕ್ಕೆ ತಳ್ಳುತ್ತಾ ಕೊನೆಗೆ ಮಂಜುನಾಥ್ ಅವರನ್ನು ಹಳ್ಳಕ್ಕೆ ನೂಕಲು ಮುಂದಾಗಿರುವ ಇವರಿಗೆ ನಾಚಿಕೆಯಾಗಬೇಕು’ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.