ರಾಮನಗರ: ಜಿಲ್ಲೆಯಲ್ಲಿ ಬುಧವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ.
ಮಾಗಡಿ ತಾಲ್ಲೂಕಿನ ಆಗಲಕೋಟೆ ಹ್ಯಾಂಡ್ ಪೋಸ್ಟ್ ಬಳಿ ಬೆಳಿಗ್ಗೆ ಆನೆಗಳ ಹಿಂಡು ಕಾಣಿಸಿಕೊಂಡಿತ್ತು. ಇದನ್ನು ಕಾಣಲು ಹೋಗಿದ್ದ ದೋಣಗುಪ್ಪೆ ನಿವಾಸಿ ಗಂಗಾಧರ್ (46) ಆನೆಗೆ ಆಹಾರ ನೀಡಲು ಮುಂದಾದರು. ಈ ಸಂದರ್ಭ ಗಜರಾಜನ ತುಳಿತಕ್ಕೆ ಸಿಕ್ಕು ಮೃತಪಟ್ಟರು.
ಮತ್ತೊಂದು ಪ್ರಕರಣದಲ್ಲಿ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಸಮೀಪದ ಚಿಕ್ಕಪೇಟೆಹಳ್ಳಿಯಲ್ಲಿ ಜಮೀನಿಗೆ ಹೋಗಿದ್ದ ರೈತ ರುದ್ರೇಗೌಡ (55) ಎಂಬುವರು ಆನೆ ದಾಳಿಗೆ ಒಳಗಾಗಿ ಮೃತಪಟ್ಟರು. ಕಾವೇರಿ ವನ್ಯಜೀವಿ ಧಾಮಕ್ಕೆ ಹೊಂದಿಕೊಂಡಂತೆ ಈ ಗ್ರಾಮವಿದ್ದು, ಮುಂಜಾನೆ ರೈತ ಜಮೀನಿಗೆ ತೆರಳಿದ್ದ ವೇಳೆ ಆನೆ ದಾಳಿ ನಡೆಸಿದೆ.