ಕುದೂರು: ಪಟ್ಟಣ ಮತ್ತು ಹೋಬಳಿ ಸೇರಿದಂತೆ ಮಂಗಳವಾರ ಯುಗಾದಿ ಹಬ್ಬವನ್ನು ಜನರು ಬರದ ಛಾಯೆಯ ನಡುವೆಯೂ ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆಯಿಂದಲೇ ಜನರು ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮನೆಯಲ್ಲಿ ತಯಾರಿಸಲಾಗಿದ್ದ ಹೋಳಿಗೆ ಊಟ ಸವಿದರು. ಬೇವು ಬೆಲ್ಲವನ್ನು ಸಮಾನವಾಗಿ ಸ್ವೀಕರಿಸಿ, ಬಂಧು ಬಳಗದವರೆಲ್ಲರಿಗೂ ವಿತರಿಸಿದರು.
ದೇವಸ್ಥಾನವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪಟ್ಟಣದ ಹಲವು ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿತ್ತು.
ಯುಗಾದಿ ಹಬ್ಬದ ಜತೆಗೆ ಈ ಬಾರಿ ರಂಜಾನ್ ಕೂಡ ಬಂದಿದ್ದು, ಹೀಗಾಗಿ ಮಟನ್ಗೆ ಭಾರೀ ಬೇಡಿಕೆ ಬಂದಿತ್ತು. ಕುರಿ, ಮೇಕೆಗಳ ಬೆಲೆ ಹೆಚ್ಚಾಗಿತ್ತು. ಅದರಲ್ಲೂ ನಾಟಿ ಮರಿಗಳಿಗೆ ಬೇಡಿಕೆ ಹೆಚ್ಚಾಗಿತ್ತು.