ರಾಮನಗರ: ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಬುಧವಾರ ಜಿಲ್ಲೆಯ ವಿವಿಧೆಡೆ ನರೇಗಾ ಯೋಜನೆ ಅಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಪ್ರಗತಿ ವೀಕ್ಷಿಸಿದರು.
ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ರೈತರಾದ ಸಂಜೀವೆಗೌಡ, ಉಗ್ರಪ್ಪ ಎಂಬುವರ ಶ್ರೀಗಂಧದ ಫಾರ್ಮ್ ಹೌಸ್ ಗೆ ಸಚಿವರು ಭೇಟಿ ನೀಡಿದರು. 'ಶ್ರೀಗಂಧದ ಬೀಡು ಕರ್ನಾಟಕದಲ್ಲಿ ಗಂಧದ ಅರಣ್ಯ ಕೃಷಿ ಮಾಡಲು ನರೇಗಾ ಯೋಜನೆಯ ಅಡಿ ಹೆಚ್ಚಿನ ಸವಲತ್ತು ನೀಡಲಾಗುವುದು. ರೇಷ್ಮೆ, ಹೈನುಗಾರಿಕೆ, ಕೋಳಿ ಸಾಕಣೆಗೆ ರೈತರು ನರೇಗಾ ಯೋಜನೆಯನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿ ಗಂಧ ಬೆಳೆಯುವ ರೈತರಿಗೆ ಸವಲತ್ತುಗಳನ್ನು ನೀಡುವ ಜೊತೆಗೆ ಶ್ರೀಗಂಧದ ಮರಗಳಿಗೆ ರಕ್ಷಣೆ ನೀಡಬೇಕು ಎಂದು ಕೋರಿದರು.
ಮಾಗಡಿ ತಾಲ್ಲೂಕಿನ ಮೋಟಗೊಂಡನಹಳ್ಳಿಯಲ್ಲಿ ನರೇಗಾ ಅಡಿ ಪುನರುಜ್ಜೀವನಗೊಂಡ ಕಲ್ಯಾಣಿಯನ್ನು ಸಚಿವರು ವೀಕ್ಷಿಸಿದರು. ರಾಮನಗರ ತಾಲ್ಲೂಕಿನ ಹಾಗಲಹಳ್ಳಿಯಲ್ಲಿ ರೇಷ್ಮೆ ಕೃಷಿ ಪರಿಶೀಲಿಸಿದರು.
ಮಕ್ಕಳಿಗೆ ನಿರಾಸೆ: ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿಯಲ್ಲಿ ನರೇಗಾ ಯೋಜನೆ ಅಡಿ ಅಭಿವೃದ್ಧಿ ಪಡಿಸಿದ ಶಾಲಾ ಆಟದ ಮೈದಾನವನ್ನು ಕೇಂದ್ರ ಸಚಿವರು ಉದ್ಘಾಟಿಸಬೇಕಿತ್ತು. ಆದರೆ ಸಮಯದ ಅಭಾವದ ನೆಪವೊಡ್ಡಿ ಸಚಿವರು ಇಲ್ಲಿಗೆ ಭೇಟಿ ನೀಡಲಿಲ್ಲ. ಮಂತ್ರಿಗಳಿಂದ ಕ್ರೀಡಾಂಗಣ ಉದ್ಘಾಟಿಸಲು ಬೆಳಿಗ್ಗೆಯಿಂದ ಕಾದಿದ್ದ ವಿದ್ಯಾರ್ಥಿಗಳು, ಶಿಕ್ಷಕರಿಗೆ ಇದರಿಂದ ನಿರಾಸೆ ಆಯಿತು. ಅಂತೆಯೇ ಸಚಿವರ ಇನ್ನೂ ಕೆಲವು ಪೂರ್ವ ನಿಗದಿತ ಕಾರ್ಯಕ್ರಮಗಳು ರದ್ದಾದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.