ನೆಲಮಂಗಲಕ್ಕೆ ಸೋಲೂರು ಸೇರ್ಪಡೆ ಸ್ವಾಗತಾರ್ಹ. ಸರ್ಕಾರದ ನಿರ್ಧಾರಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಈಗಾಗಲೇ ಮಾಗಡಿ ತಾಲ್ಲೂಕಿನಲ್ಲಿ ವಿರೋಧ ವ್ಯಕ್ತವಾಗಿದೆ. ಅಧಿಕೃತವಾಗಿ ಸೇರಿಸಲು ಕ್ರಮವಾಗಬೇಕುಜಗದೀಶ್ ಚೌಧರಿ, ತಾಲ್ಲೂಕು ಅಧ್ಯಕ್ಷ, ಬಿಜೆಪಿ ನೆಲಮಂಗಲ ಘಟಕ
ಸೋಲೂರು ಸೇರ್ಪಡೆಯಿಂದ ಕಂದಾಯ ಇಲಾಖೆಯ ಕಡತಗಳನ್ನು ಪಡೆಯುವುದು ಸಮಸ್ಯೆಯಾಗಲಿದೆ. ಆದರೂ, ಮತದಾನ ಮಾಡುವ ಕ್ಷೇತ್ರಕ್ಕೆ ಹೋಬಳಿ ಸೇರಿಸಿರುವುದು ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು
‘ಸೋಲೂರು ಹೋಬಳಿಯನ್ನು ಮಾಗಡಿ ತಾಲ್ಲೂಕಿನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ, ಅದಕ್ಕೆ ಜನ ಬೆಂಬಲ ಸಿಗಲಿಲ್ಲ. ನನ್ನ ಮಾತಿಗೆ ಯಾರೂ ದನಿಗೂಡಿಸಿ ಶಕ್ತಿ ತುಂಬಲಿಲ್ಲ. ಸೋಲೂರು ಹೋಬಳಿಯವರೇ ನಾವು ನೆಲಮಂಗಲಕ್ಕೆ ಸೇರಿಕೊಳ್ಳುತ್ತೇವೆ, ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಎಂದು ನನ್ನ ಮೇಲೆ ಒತ್ತಡ ಹಾಕಿದರು. ಚಿಕ್ಕಬಳ್ಳಾಪುರ ಸಂಸದರು ಸಹ ದನಿ ಎತ್ತಿದರು. ನೆಲಮಂಗಲ ಶಾಸಕ ಶ್ರೀನಿವಾಸ್ ಹೋಬಳಿಯನ್ನ ತಮ್ಮ ತಾಲ್ಲೂಕಿಗೆ ಸೇರಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿ, ಸಚಿವ ಸಂಪುಟದಲ್ಲಿ ಹೋಬಳಿ ಸೇರ್ಪಡೆ ವಿಷಯಕ್ಕೆ ಒಪ್ಪಿಗೆ ಪಡೆದಿದ್ದಾರೆ. ಈಗಲೂ ಕಾನೂನಾತ್ಮಕವಾಗಿ ಸರ್ಕಾರದ ಮೇಲೆ ಒತ್ತಡ ತಂದು ಹೋಬಳಿಯನ್ನು ಮಾಗಡಿಯಲ್ಲೇ ಉಳಿಸಿಕೊಳ್ಳುವ ಜವಾಬ್ದಾರಿ ತಾಲ್ಲೂಕಿನ ಜನರ ಮೇಲಿದೆ. ಈ ಕುರಿತು, ಸಂಘಟನೆಗಳ ಮುಖಂಡರು ಹಾಗೂ ಸೋಲೂರು ಹೋಬಳಿಯವರು ಸೇರಿ ಹೋರಾಟ ರೂಪಿಸಿ ಜನರೊಂದಿಗೆ ಬೀದಿಗಿಳಿದರೆ ನಾನು ಸಹ ಹೋರಾಟಕ್ಕೆ ಕೈ ಜೋಡಿಸುವೆ. ಅದು ಬಿಟ್ಟು ರಾಜ್ಯಪಾಲರು ಸೇರಿದಂತೆ ಯಾರ್ಯಾರಿಗೊ ಮನವಿ ಕೊಟ್ಟು ಡವ್ ಮಾಡುವುದನ್ನು ಬಿಡಬೇಕು’ಎಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ
‘ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹಾಗೂ ಮಾಗಡಿ ತಾಲ್ಲೂಕಿನ ಕಂದಾಯ ವ್ಯಾಪ್ತಿಗೆ ಬರುವ ಸೋಲೂರು ಹೋಬಳಿಯನ್ನು ಸಂಪೂರ್ಣವಾಗಿ ನೆಲಮಂಗಲಕ್ಕೆ ಸೇರಿಸುವುದಾಗಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೋಬಳಿಯ ಜನರಿಗೆ ಭರವಸೆ ನೀಡಿದ್ದೆ. ಕೊಟ್ಟ ಮಾತಿನಂತೆ ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಎಲ್ಲಾ ಸಚಿವರಿಗೂ ನೆಲಮಂಗಲ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸುವೆ. ನೆಲಮಂಗಲದ ಭಾಗವಾಗಿರುವ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ’.ಎನ್. ಶ್ರೀನಿವಾಸ್, ನೆಲಮಂಗಲ ಶಾಸಕ
‘ಸೋಲೂರು ಹೋಬಳಿ ಭಾವನಾತ್ಮಕವಾಗಿ ಮಾಗಡಿ ತಾಲ್ಲೂಕಿನ ಅವಿಭಾಜ್ಯ ಅಂಗ. ಐದು ಬಾರಿ ಶಾಸಕರಾಗಿರುವ ಬಾಲಕೃಷ್ಣ ಅವರು ಇಷ್ಟು ಸುಲಭವಾಗಿ ಸೋಲೂರು ಹೋಬಳಿಯನ್ನು ಪಕ್ಕದ ನೆಲಮಂಗಲಕ್ಕೆ ಬಿಟ್ಟು ಕೊಟ್ಟಿದ್ದಾರೆ ಎಂದರೆ ನಂಬಲು ಆಗುತ್ತಿಲ್ಲ. ಇದು ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ. ಹೋಬಳಿ ಸೇರ್ಪಡೆಗೆ ಇರುವ ಎಲ್ಲಾ ಮಾನದಂಡಗಳನ್ನು ಗಾಳಿಗೆ ತೂರಲಾಗಿದೆ. ಮುಂದೆ ಕ್ಷೇತ್ರ ಪುನರ್ ವಿಂಗಡಣೆಯಾದಾಗ ಹೋಬಳಿಯನ್ನು ಯಾವ ತಾಲ್ಲೂಕಿಗೆ ಸೇರಿಸಬೇಕು ಎಂಬ ಗೊಂದಲ ಸೃಷ್ಟಿಯಾಗುತ್ತದೆ. ಹಾಗಾಗಿ, ಯಾವುದೇ ಕಾರಣಕ್ಕೂ ಮಾಗಡಿ ತಾಲ್ಲೂಕಿನಿಂದ ಸೋಲೂರು ಕೈ ಬಿಡಬಾರದು. ಈ ಬಗ್ಗೆ ಶಾಸಕರು ಹೋರಾಟ ಮಾಡಬೇಕು. ಹೋಬಳಿಯನ್ನು ನಮ್ಮಲ್ಲೇ ಉಳಿಸಿಕೊಳ್ಳಲು ಕಾನೂನಾತ್ಮಕ ಹೋರಾಟ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ’.ಎ. ಮಂಜುನಾಥ್, ಮಾಜಿ ಶಾಸಕ ಹಾಗೂ ಜೆಡಿಎಸ್ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ
‘47 ವರ್ಷದಿಂದ ಸಂಕಷ್ಟದಲ್ಲಿದ್ದ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಿದ್ದು ಸಂತೋಷದ ವಿಚಾರ. ಹಿಂದಿನ ಸರ್ಕಾರವೇ ಈ ಕೆಲಸ ಮಾಡಬೇಕಿತ್ತು. ಈಗಿನ ಶಾಸಕ ಶ್ರೀನಿವಾಸ್ ಅವರ ಶ್ರಮದಿಂದ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ನಮ್ಮ ಹಿರಿಯ ಶ್ರೀಗಳು ಸಹ ಸೋಲೂರನ್ನು ನೆಲಮಂಗಲಕ್ಕೆ ಸೇರಿಸುವಂತೆ ಅನೇಕ ಬಾರಿ ಜನಪ್ರತಿನಿಧಿಗಳಿಗೆ ಸಲಹೆ ನೀಡಿದ್ದರು. ನೆಲಮಂಗಲ ಭೌಗೋಳಿಕವಾಗಿ ದೊಡ್ಡದಾಗಿದೆ. ಸೋಲೂರು ಸೇರ್ಪಡೆಯಿಂದ ಮಾಗಡಿಗೆ ಯಾವುದೇ ಸಮಸ್ಯೆ ಇಲ್ಲ. ಇದರಿಂದ ನಮ್ಮ ಭಾಗದ ಜನರಿ ಅನುಕೂಲವಾಗಲಿದೆ’ಮಹಾಲಿಂಗ ಸ್ವಾಮೀಜಿ, ಬಂಡೆ ಮಠ, ಸೋಲೂರು
ಕೆಂಪೇಗೌಡರ ಮಾಗಡಿಯ ಅವಿಭಾಜ್ಯ ಅಂಗ ಸೋಲೂರು. ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾದ ನಂತರ, ಹೋಬಳಿಯನ್ನು ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಿ ಜನರಲ್ಲಿ ಗೊಂದಲ ಉಂಟು ಮಾಡಲಾಯಿತು. ಮಾಗಡಿ ತಾಲ್ಲೂಕು ಕಂದಾಯ ವ್ಯಾಪ್ತಿಯಲ್ಲಿದ್ದ ಸೋಲೂರನ್ನು ಇದೀಗ ಪೂರ್ಣವಾಗಿ ನೆಲಮಂಗಲಕ್ಕೆ ಸೇರಿಸಿರುವುದನ್ನು ನಾವು ವಿರೋಧಿಸುತ್ತೇವೆ. ಬದಲಿಗೆ, ಸೋಲರನ್ನು ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು.ಹೊಸಪಾಳ್ಯ ಲೋಕೇಶ್, ಅಧ್ಯಕ್ಷ, ಮಾಗಡಿ ತಾಲ್ಲೂಕು ರೈತ ಸಂಘ
ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವಂತೆ ಹಲವು ವರ್ಷಗಳಿಂದ ಈ ಭಾಗದ ಜನರು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಕುರಿತು, ಮಾಜಿ ಶಾಸಕ ಡಾ. ಶ್ರೀನಿವಾಸ್ ಜೊತೆಗೂ ಪತ್ರ ವ್ಯವಹಾರ ಮಾಡಲಾಗಿತ್ತು. ಜಿಲ್ಲಾಧಿಕಾರಿಗೂ ಪತ್ರ ಬರೆದು ನೆಲಮಂಗಲಕ್ಕೆ ಸೇರಿಸುವಂತೆ ಕೋರಲಾಗಿತ್ತು. ಕಡೆಗೆ ಶಾಸಕ ಎನ್. ಶ್ರೀನಿವಾಸ್ ಅವರ ಶ್ರಮದಿಂದಾಗಿ ಹೋಬಳಿಯು ನೆಲಮಂಗಲಕ್ಕೆ ಸೇರ್ಪಡೆಯಾಗಿದೆ.ಮುಜಾಹೀದ್ ಪಾಷ, ಅಧ್ಯಕ್ಷ, ಸೋಲೂರು ಗ್ರಾಮ ಪಂಚಾಯಿತಿ
‘ಸೋಲೂರು ಹೋಬಳಿಯು ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿಗೆ ಸೇರುತ್ತದೆ. ನೆಲಮಂಗಲವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು. ಹೀಗಿರುವಾಗ, ಒಂದು ಜಿಲ್ಲೆಯ ಹೋಬಳಿಯನ್ನು ಮತ್ತೊಂದು ಜಿಲ್ಲೆಗೆ ಸೇರಿಸಲು ಅವಕಾಶವಿಲ್ಲ. ಬದಲಿಗೆ, ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಸೋಲೂರನ್ನು ವಾಪಸ್ ಮಾಗಡಿಗೆ ಸೇರಿಸಿಕೊಳ್ಳಬೇಕು. ಈ ಕುರಿತು ರಾಜ್ಯಪಾಲರಿಗೆ ತಾಲ್ಲೂಕಿನ ಹೋರಾಟಗಾರರ ನಿಯೋಗದಿಂದ ಮನವಿ ಸಲ್ಲಿಸಿದ್ದೇವೆ’.ಕನ್ನಡ ಕುಮಾರ್, ಪ್ರಗತಿಪರ ರೈತ, ಮಾಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.