ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಪಾರಂಪರಿಕ ಕಟ್ಟಡ ಮರು ನಿರ್ಮಾಣಕ್ಕೆ 3ಡಿ ತಂತ್ರಜ್ಞಾನ

ಕಟ್ಟಡ ಡಿಜಿಟಲೀಕರಣಕಾರ್ಯಕ್ಕೆ ಸಿಇಒ ಎಂ.ಎಲ್‌. ವೈಶಾಲಿ ಚಾಲನೆ
Last Updated 16 ಸೆಪ್ಟೆಂಬರ್ 2020, 13:01 IST
ಅಕ್ಷರ ಗಾತ್ರ

ಶಿವಮೊಗ್ಗ: ಹಾನಿಗೊಳಗಾದ ಸ್ಮಾರಕ, ಕಟ್ಟಡಗಳ ಮರು ನಿರ್ಮಾಣಕ್ಕೆ 3ಡಿ ತಂತ್ರಜ್ಞಾನ ಸಹಕಾರಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್‌. ವೈಶಾಲಿ ಹೇಳಿದರು.

ಇಲ್ಲಿನ ಶಿವಪ್ಪ ನಾಯಕ ಅರಮನೆಯಲ್ಲಿ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳು, ಅರಮನೆ, ದೇವಸ್ಥಾನಗಳನ್ನು 3ಡಿ ಲೇಸರ್ ತಂತ್ರಜ್ಞಾನ ಬಳಸಿ ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 12 ಪಾರಂಪರಿಕ ಕಟ್ಟಡ, ಅರಮನೆ, ಸ್ಮಾರಕಗಳನ್ನು ಈ ಕಾರ್ಯಕ್ಕಾಗಿ ಗುರುತಿಸಲಾಗಿದೆ. ಈ ತಂತ್ರಜ್ಞಾನ ಸ್ಮಾರಕಗಳ ಮೂಲ ಸ್ವರೂಪವನ್ನು ನಿರ್ಧರಿಸಲು ಮತ್ತು ಪಾರಂಪರಿಕ ತಾಣಗಳ ಸೌಲಭ್ಯಗಳನ್ನು ಸುಧಾರಿಸಲು ಸಹಕಾರಿಯಾಗಲಿದೆ. ಇದರಿಂದ ಡಿಜಿಟಲ್ ಪುನರ್ ನಿರ್ಮಾಣ ಮತ್ತು ಸ್ಮಾರಕಗಳ ಮಾಪನ ವಿಶ್ಲೇಷಣೆ ಮಾಡಬಹುದು ಎಂದರು.

ಶಿವಪ್ಪ ನಾಯಕ ಅರಮನೆ, ಕೋಟೆ ಆಂಜನೇಯ ದೇವಾಲಯ, ಭೀಮೇಶ್ವರ ದೇವಾಲಯ, ಕುಸ್ಕೂರಿನ ಭೀಮೇಶ್ವರ ದೇವಾಲಯ, ಭದ್ರಾವತಿಯ ಲಕ್ಷ್ಮೀ ನರಸಿಂಹ ದೇವಾಲಯ, ಹೊಸನಗರ ತಾಲ್ಲೂಕಿನ ಸಾಲಗೇರಿಯ ಉಮಾಪತಿ ದೇವಾಲಯ, ಶಿವಪ್ಪ ನಾಯಕನ ಗೋಪುರ, ಶಿಕಾರಿಪುರ-ಚಿಕ್ಕಮಾಗಡಿ ಜೈನಬಸ್ತಿ, ನರಸಾಪುರ ಬಸದಿ, ಸೊರಬ ತಾಲ್ಲೂಕಿನ ಪುರಗ್ರಾಮದ ಸೋಮೇಶ್ವರ ದೇವಾಲಯ, ದವನಿ ಭೈಲಿನ ಕಪಿಲೇಶ್ವರ ದೇವಾಲಯಗಳ 3ಡಿ ಡಿಜಿಟಲೀಕರಣ ಕಾರ್ಯ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಡಿಜಿಟಲೀಕರಣದ ಮೂಲಕ ಸ್ಮಾರಕಗಳ ಅಳತೆ, ಆಳ, ಅಗಲ, ಸ್ಮಾರಕಕ್ಕೆ ಬಳಸಲಾಗಿರುವ ಸಾಮಗ್ರಿ, ನಿರ್ಮಾಣಗೊಂಡ ವರ್ಷ, ಯಾರ ಕಾಲದಲ್ಲಿ ನಿರ್ಮಾಣಗೊಂಡಿದೆ, ವರ್ಷ ಮತ್ತು ಐತಿಹಾಸಿಕ ವಿವರಗಳು, ವಾಸ್ತು ಶಿಲ್ಪದ ಶೈಲಿಯನ್ನು ಸಹ ಕ್ರೋಢೀಕರಿಸಿ ಸಂಗ್ರಹಿಸಲಾಗುತ್ತದೆ. ಈ ಮಾಹಿತಿಯು ಸಂಶೋಧಕರಿಗೆ, ಇತಿಹಾಸಕಾರರಿಗೆ ಅನೇಕ ವಿವರಗಳೊಂದಿಗೆ ಇತಿಹಾಸವನ್ನು ಪುನರ್ ನಿರ್ಮಿಸಲು ಅವಕಾಶ ಕಲ್ಪಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ರಾಜಶೇಖರ್, ಸಚಿನ್, ಎನ್‍ಆರ್‌ಡಿಎಂಎಸ್ ಸಂಸ್ಥೆಯ ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT