ಸಾಗರ: ತಾಲ್ಲೂಕಿನ ಮಾಸೂರು ಗ್ರಾಮದ ಸ.ನಂ.105ರಲ್ಲಿರುವ 7.15 ಎಕರೆ ಗೋಮಾಳ ಪ್ರದೇಶದ ಖಾತೆ ಪಹಣಿಯನ್ನು ಬೇರೊಬ್ಬರ ಹೆಸರಿಗೆ ಬದಲಿಸಿದ್ದು, ಇದನ್ನು ರದ್ದುಪಡಿಸದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಮೆಳವರಿಗೆ ಗ್ರಾಮಸ್ಥರು ಬಹಿಷ್ಕರಿಸುತ್ತಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ಮೆಳವರಿಗೆ ಎಚ್ಚರಿಸಿದ್ದಾರೆ.
1963-64ರಲ್ಲಿ ನಾರಾಯಣಪ್ಪ ಎಂಬುವವರಿಗೆ ಗೇರು ಬೇಸಾಯ ಮಾಡಬೇಕು ಎಂಬ ಷರತ್ತಿನ ಮೇಲೆ ಸ.ನಂ.105ರಲ್ಲಿರುವ ಭೂಮಿ ಮಂಜೂರಾಗಿತ್ತು. ಅವರು ಯಾವುದೆ ಬೇಸಾಯ ಮಾಡದೆ ಇರುವ ಕಾರಣ ಭೂಮಿಯನ್ನು ಸರ್ಕಾರಕ್ಕೆ ಮರಳಿಸಬೇಕು. ಆದರೆ ನಾರಾಯಣಪ್ಪ ಅವರು ತಮಗೆ ಈ ಭೂಮಿಯ ಮೇಲೆ ಹಕ್ಕು ಇದೆ ಎಂದು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.
ಗ್ರಾಮದ ಗೋಮಾಳ ಭೂಮಿಯನ್ನು ಗ್ರಾಮಕ್ಕೆ ಉಳಿಸಿಕೊಳ್ಳಬೇಕು ಎಂಬುದು ಗ್ರಾಮಸ್ಥರ ಕಳಕಳಿಯಾಗಿದೆ. ಈ ಸಂಬಂಧ ನ್ಯಾಯ ಒದಗಿಸಿಕೊಡುವಂತೆ ಗ್ರಾಮಸ್ಥರು ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಬಳಿ ಹೋಗಿದ್ದರು. ಆದರೆ ಶಾಸಕರು ಅವರ ಮನವಿಗೆ ಸೂಕ್ತವಾಗಿ ಸ್ಪಂದಿಸದಿರುವುದು ಗ್ರಾಮಸ್ಥರಿಗೆ ನೋವು ತಂದಿದೆ ಎಂದರು.
ಕಾನೂನಿನ ನಿಯಮಗಳನ್ನು ಉಲ್ಲಂಘಿಸಿಯೂ ನಾರಾಯಣಪ್ಪ ಅವರು ಗೋಮಾಳ ಪ್ರದೇಶದ ಭೂಮಿಯನ್ನು ತಮ್ಮದಾಗಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ಆದಾಗ್ಯೂ ತಾಲ್ಲೂಕು ಆಡಳಿತ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಧಿಕಾರಿ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.