ಹೊಸನಗರ: ತಾಲ್ಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಪ್ಪಿನಮಲ್ಲಿ ಗ್ರಾಮದ ರೈತ ದಂಪತಿ ತಮ್ಮ ಊರಿನ ಶಾಲೆಗೆ ಸುಸಜ್ಜಿತವಾದ ರಂಗಮಂದಿರವನ್ನು ನಿರ್ಮಿಸಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.
ಗ್ರಾಮದ ಕಬ್ಬಳ್ಳಿ ಶಿವಮ್ಮ ಮತ್ತು ವೀರಭದ್ರಪ್ಪ ದಂಪತಿ ತಮ್ಮ ದುಡಿಮೆಯಿಂದ ಬಂದ ಆದಾಯದಲ್ಲಿಯೇ ರಂಗಮಂದಿರ ನಿರ್ಮಿಸಿ ಕೊಟ್ಟಿದ್ದಾರೆ.
60 ವರ್ಷಗಳನ್ನು ಪೂರೈಸುತ್ತಿರುವ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೊಪ್ಪಿನಮಲ್ಲಿ ಸುತ್ತಲಿನ ಗ್ರಾಮಗಳಾದ ಹೂವಿನಕೋಣೆ, ಮುತ್ತಲ ಸೇರಿ ನಾಲ್ಕೈದು ಊರಿನ ಮಕ್ಕಳು ಕಲಿಯಲು ಬರುತ್ತಾರೆ. ಆದರೆ, ಶಾಲೆಗೆ ಒಂದು ಒಳ್ಳೆಯ ರಂಗಮಂದಿರ ಇದುವರೆಗೂ ಇರಲಿಲ್ಲ. ಸರ್ಕಾರಕ್ಕೂ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಇದನ್ನು ಗಮನಿಸಿದ ದಂಪತಿ ರಂಗಮಂದಿರ ನಿರ್ಮಿಸಿದ್ದಾರೆ.
ಸ್ವತಃ ಕೆಲಸಕ್ಕೆ ನಿಂತ ದಂಪತಿ:
ರಂಗಮಂದಿರದ ನಿರ್ಮಾಣಕ್ಕೆ ದಂಪತಿಯೇ ಕೈಯಾಳಾಗಿ ಕೆಲಸ ನಿರ್ವಹಿಸಿದ್ದಾರೆ. ಕಾಮಗಾರಿ ಮುಗಿಯುವವರೆಗೂ ಕಷ್ಟಪಟ್ಟು ದುಡಿದು, ನಿಗದಿತ ವೇಳೆಗೆ ಕಾಮಗಾರಿ ಮುಗಿಸಿ ಶಾಲೆಗೆ ರಂಗಮಂದಿರವನ್ನು ಶನಿವಾರ ಹಸ್ತಾಂತರಿಸಿದರು.
ಎಲ್ಲರೂ ಜೀವನದಲ್ಲಿ ಸಾಕಷ್ಟು ನೋವು ತಿಂದಿರುತ್ತಾರೆ. ಆ ನೋವುಗಳನ್ನು ಮರೆಯಲು ಮನುಷ್ಯ ಸೇವೆ ಮತ್ತು ದಾನ ಮಾರ್ಗವನ್ನು ಹಿಡಿಯಬೇಕು. ದಾನಕ್ಕೆ ಎಲ್ಲಾ ನೋವು ಮರೆಸುವ ಶಕ್ತಿ ಇದೆ ಎಂದು ದಾನಿ ವೀರಭದ್ರಪ್ಪ ತಿಳಿಸಿದರು.
ಮಾರುತಿಪುರ ಸರ್ಕಾರಿ ಪ್ರೌಢಶಾಲೆ ಸೇರಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವೀರಭದ್ರಪ್ಪ ದಂಪತಿ ನಿರಂತರವಾಗಿ ದಾನ ನೀಡುತ್ತಾ ಬಂದಿದ್ದಾರೆ. ಈ ಹಿಂದೆಯೂ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ್ದರು ಎಂದು ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್ ಗೌಡ ಸ್ಮರಿಸಿದರು.
ರಂಗಮಂದಿರ ಹಸ್ತಾಂತರ ಕಾರ್ಯಕ್ರಮದಲ್ಲಿ ಈರಮ್ಮ ಕೊಲ್ಲೂರಪ್ಪ ಕಬ್ಬಳ್ಳಿ, ಶಾಲಾ ಸಹ ಶಿಕ್ಷಕರಾದ ಪ್ರಶಾಂತ್, ಗೌರಮ್ಮ ಹಾಗೂ ಕಬ್ಬಳ್ಳಿ ಕುಟುಂಬದ ಲಕ್ಷ್ಮಣ ಕಬ್ಬಳ್ಳಿ, ಗಣೇಶ್ ಕಬ್ಬಳ್ಳಿ, ಮೋಹನ್ ಕಬ್ಬಳ್ಳಿ ದಂಪತಿ ಇದ್ದರು. ಸಂತೋಷ್ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.