ಆನಂದಪುರ: ‘ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನನಗೆ ಕಾಂಗ್ರೆಸ್ ಪಕ್ಷ ಸಾಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿದೆ’ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣಕ್ಕೆ ಬಂದ ಅವರನ್ನು ಅಭಿಮಾನಿಗಳು ಸ್ವಾಗತಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಕೇಂದ್ರ ಹಾಗೂ ರಾಜ್ಯದ ನಾಯಕರು ಕಾಗೋಡು ತಿಮ್ಮಪ್ಪ ಅವರ ಜತೆ ಮಾತನಾಡಿ ಅವರ ಅಭಿಪ್ರಾಯ ತೆಗೆದುಕೊಂಡು ಈ ತೀರ್ಮಾನಕ್ಕೆ ಬಂದಿದ್ದಾರೆ. ಕಾಗೋಡು ತಿಮ್ಮಪ್ಪ ಅವರು ಸ್ಪರ್ಧಿಸುವುದಿಲ್ಲ ಎಂದು ಎಐಸಿಸಿಯಿಂದ ಮಾಹಿತಿ ಪಡೆದು ನನಗೆ ಟಿಕೆಟ್ ನೀಡಿದ್ದಾರೆ. ಪಕ್ಷದಲ್ಲಿ ಯಾರೆಲ್ಲಾ ಅಸಾಮಧಾನಗೊಂಡಿದ್ದರೂ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳವ ಕೆಲಸವನ್ನು ಮಾಡಲಾಗುವುದು. ನಾನು ಯಾರನ್ನೂ ದ್ವೇಷ ಮಾಡಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಇದೆ’ ಎಂದು ಹೇಳಿದರು.
‘ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಬಂಡಾಯ ಏಳುವ ಸಾಧ್ಯತೆ ಇಲ್ಲ. ಪಕ್ಷ ಅವರಿಗೆ ಎಲ್ಲಾ ಅಧಿಕಾರ ನೀಡಿದೆ. ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು’ ಎಂದರು.
‘ಜನರ, ಅಭಿಮಾನಿಗಳ ಆಶೀರ್ವಾದವಿದೆ. 10 ವರ್ಷ ಅಧಿಕಾರವಿಲ್ಲದಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಜತೆಯಲ್ಲಿಯೇ ಇದ್ದೇನೆ’ ಎಂದರು.
ಆನಂದಪುರ ಸಮೀಪದ ಗಿಳಾಲಗುಂಡಿಯಿಂದ ಸಾಗರದವರೆಗೆ ಅಭಿಮಾನಿಗಳು ಕಾರು ರ್ಯಾಲಿ ನಡೆಸಿದರು. ನಂತರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.