ಸಾಗರ: ಇಲ್ಲಿನ ವಕೀಲರ ಸಂಘದ ಸದಸ್ಯೆ ಜ್ಯೋತಿ ಕೋವಿ ವಿರುದ್ಧ ದಾಖಲಾಗಿರುವ ಜಾತಿನಿಂದನೆ ಪ್ರಕರಣದಲ್ಲಿ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸಂಘದ ಪದಾಧಿಕಾರಿಗಳು ಸೋಮವಾರ ಎಎಸ್ಪಿ ರೋಹನ್ ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು.
ಸರಸ್ವತಿ ಎಂಬ ಶಿಕ್ಷಕಿ ನೀಡಿರುವ ದೂರಿನ ಆಧಾರದ ಮೇಲೆ ವಕೀಲೆ ಜ್ಯೋತಿ ಕೋವಿ ವಿರುದ್ಧ ಗ್ರಾಮಾಂತರ ಠಾಣೆ ಪೊಲೀಸರು ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ. ಆದರೆ ದೂರಿನಲ್ಲಿ ಉಲ್ಲೇಖಿಸಿರುವ ದಿನದಂದು ಘಟನಾ ಸ್ಥಳದಲ್ಲಿ ಜ್ಯೋತಿ ಕೋವಿ ಅವರು ಇರಲಿಲ್ಲ. ಆದಾಗ್ಯೂ ಅವರ ವಿರುದ್ಧ ದೂರುದಾರರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ತಿಳಿಸಿದರು.
ವಕೀಲೆ ಜ್ಯೋತಿ ಕೋವಿ ವಿರುದ್ಧ ಕೆಲವರು ಅವರ ಮೇಲಿನ ವೈಯಕ್ತಿಕ ದ್ವೇಷದ ಕಾರಣಕ್ಕೆ ಸುಳ್ಳು ದೂರು ಕೊಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರಿನ ಕುರಿತು ತನಿಖೆ ನಡೆಸಿ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.
ವಕೀಲರ ಸಂಘದ ಅಧ್ಯಕ್ಷ ಈ. ನಾಗರಾಜ್, ಕಾರ್ಯದರ್ಶಿ ರಮೇಶ್ ಎಚ್.ಬಿ., ಸದಸ್ಯರಾದ ಕೆ.ವಿ. ಪ್ರವೀಣಕುಮಾರ್, ಕರುಣಾಕರ, ಡಿ.ಎಂ. ರಾಘವೇಂದ್ರ, ಶಿಲ್ಪ, ಶುಭ, ಸೈದೂರು ರಾಘವೇಂದ್ರ, ವಿದ್ಯಾ ಅವರೂ ಇದ್ದರು.