ಸೊರಬ: ತಾಲ್ಲೂಕಿನ ಜಡೆ, ಆನವಟ್ಟಿ ಹೋಬಳಿ ವ್ಯಾಪ್ತಿಯ ಸುತ್ತಲಿನ ಗ್ರಾಮಗಳ ಮೇದಾರ ಕುಟುಂಬಗಳು ಬಿದಿರು ಹೆಣೆದು ವಿವಿಧ ಪರಿಕರ ತಯಾರಿಸುವ ಮೂಲಕ ಆಧುನಿಕತೆಯ ಪ್ರಭಾವ ಮೆಟ್ಟಿ ನಿಂತು ಕುಲಕಸುಬು ಮುಂದುವರಿಸಿವೆ. ಆದರೆ, ಸಮರ್ಪಕ ಮಾರುಕಟ್ಟೆ ಕೊರತೆಯಿಂದಾಗಿ ನಲುಗಿವೆ.
12ನೇ ಶತಮಾನದಲ್ಲಿ ಶಿವಶರಣರು ಪ್ರತಿಪಾದಿಸಿದ್ದ ಕಾಯಕ ನಿಷ್ಠೆಯನ್ನು ಪಾಲಿಸುತ್ತಿರುವ ತಾಲ್ಲೂಕಿನ ಜಡೆ ಗ್ರಾಮದ ಶಾಂತಮ್ಮ ಅವರದ್ದೂ ಸೇರಿದಂತೆ ಅನೇಕ ಕುಟುಂಬಗಳು ಕುಲಕಸುಬನ್ನೇ ನಂಬಿಕೊಂಡಿದ್ದು, ಬಿದಿರಿನಲ್ಲಿ ಮೊರ, ಬುಟ್ಟಿ, ಕೂಣಿ, ತೊಟ್ಟಿಲು, ಮಂಕ್ರಿ ಹೆಣೆದು ಜೀವನ ಸಾಗಿಸುತ್ತಿದೆ.
ಫಳಫಳ ಹೊಳೆಯುವ ಸ್ಟೀಲ್, ಮಣ್ಣಲ್ಲೂ ಕರಗದ ಪ್ಲಾಸ್ಟಿಕ್ ವಸ್ತುಗಳಿಗೆ ಮಾರು ಹೋಗಿರುವ ಜನರು ದೇಸಿ ನಿರ್ಮಿತ ಸಾಂಪ್ರದಾಯಕ ಉತ್ಪನ್ನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಆದರೆ, ಅದರಲ್ಲೇ ಬದುಕು ಕಂಡುಕೊಂಡ ಕುಟುಂಬಗಳಿಗೆ ಮಾತ್ರ ತಮ್ಮ ಉದ್ಯಮದ ಮೇಲೆ ಪ್ರೀತಿ ಜೊತೆಗೆ ಅನಿವಾರ್ಯತೆಯೂ ಇದೆ.
ಆಧುನಿಕತೆಯ ಸುಳಿಗೆ ಸಿಕ್ಕ ಬೇರೆ ಬೇರೆ ಕುಶಲಕರ್ಮಿಗಳು ಸೂಕ್ತ ಮಾರುಕಟ್ಟೆ ದೊರೆಯದಾದಾಗ ತಮ್ಮ ಮೂಲ ವೃತ್ತಿಯನ್ನು ಬಿಟ್ಟು ಕೂಲಿ, ಗಾರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ತಾಲ್ಲೂಕಿನ ಜಡೆ ಗ್ರಾಮದಲ್ಲಿರುವ ಮೇದಾರ ಕುಟುಂಬಗಳು ಮಾತ್ರ ಕುಲಕಸುಬನ್ನು ಬಿಟ್ಟಿಲ್ಲ.
‘ಲಾಭ, ನಷ್ಟದ ಲೆಕ್ಕ ಹಾಕದೇ ಸ್ವಾವಲಂಬಿ ಬದುಕಿಗಾಗಿ ಸ್ವಯಂ ಉದ್ಯೋಗ ನಂಬಿದ್ದೇವೆ. ಇದರಿಂದ ಆತ್ಮಗೌರವ ಹಾಗೂ ಕುಲಕಸುಬು ಉಳಿಸಲು ಸಾಧ್ಯವಾಗಿದೆ’ ಎನ್ನುತ್ತಾರೆ ಗ್ರಾಮದಲ್ಲಿ ಬುಟ್ಟಿ ಹೆಣೆಯುವ ವೆಂಕಟೇಶ.
ಬಿದಿರಿನಲ್ಲಿ ತೊಟ್ಟಿಲು, ಏಡಿಕೂಣಿ, ಭೂಮಣ್ಣಿ ಬುಟ್ಟಿ, ಚಾಪೆ, ಕಣಜ, ಮೊರ, ಕೆರಸೆ, (ಹೊಲಗದ್ದೆಗಳಿಗೆ ಗೊಬ್ಬರ ಚೆಲ್ಲಲು) ಸೇರಿ ರೈತರಿಗೆ ಬೇಕಾಗುವ ಸಾಮಗ್ರಿಗಳನ್ನು ಹೆಣೆಯಲಾಗುತ್ತದೆ. ಶಾಂತಮ್ಮ ಇಳಿ ವಯಸ್ಸಿನಲ್ಲೂ ತಮ್ಮ ಪುತ್ರನೊಂದಿಗೆ ಸೇರಿ ₹ 500ರಿಂದ ₹ 1,000 ರೂಪಾಯಿ ಆದಾಯ ಗಳಿಸುತ್ತಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಚಿತ್ತಾರವುಳ್ಳ (ಬಣ್ಣ ಹಚ್ಚಿದ) ಚಾಪೆ, ಬುಟ್ಟಿಗೆ ಉತ್ತಮ ಬೇಡಿಕೆ ಇದೆ. ಮದುವೆಗಳಲ್ಲಿ ವಧು–ವರನನ್ನು ಬಿದಿರಿನಿಂದ ಹೆಣೆದ ಚಿಬಿಲದಲ್ಲಿ (ಕೆರ್ಸಿ) ನಿಲ್ಲಿಸಿ ಮಾಂಗಲ್ಯ ಧಾರಣೆ ಮಾಡಿಸಲಾಗುತ್ತದೆ. ಬೇಸಿಗೆಯಲ್ಲಿ ಮೊರ, ಚಿಬಿಲ, (ಕೆರ್ಸಿ) ಗಳಿಗೆ ಬೇಡಿಕೆ ಜಾಸ್ತಿ. ಮಳೆಗಾಲದಲ್ಲಿ ಏಣಿ ಕೂಣಿ, ಭೂಮಣ್ಣಿ ಬುಟ್ಟಿ, ಚಾಪೆಗಳಿಗೆ ಬೇಡಿಕೆ ಇದೆ. ಬಿದಿರಿನ ವಸ್ತುಗಳು ಅಗತ್ಯವಿರುವುದರಿಂದ ಇಂದಿಗೂ ಮಹತ್ವ ಉಳಿಸಿಕೊಂಡಿದೆ.
ಆರ್ಥಿಕ ಸಂಕಷ್ಟದಲ್ಲಿ ಮೇದಾರ ಕುಟುಂಬ ಬರಗಾಲದಲ್ಲಿ ಹೆಚ್ಚಿದ ಬಿದಿರಿನ ಬೆಲೆ ಸರ್ಕಾರ ನೆರವು ನೀಡಬಹುದೆಂಬ ನಿರೀಕ್ಷೆ
ಸ್ವಂತ ಭೂಮಿ ಇಲ್ಲದೇ ಇದ್ದರೂ ಕುಲಕಸುಬಿನಿಂದ ಗೌರವಯುತ ಜೀವನ ನಡೆಸಲು ಸಾಧ್ಯವಾಗಿದೆ. ಆದರೆ ಸರ್ಕಾರ ದೇಸಿ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.ವೆಂಕಟೇಶ ಮೇದಾರ ಕುಟುಂಬದ ಸದಸ್ಯ
Cut-off box -
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.