ಸಾಗರ: ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರುವುದೇ ಕಷ್ಟ ಎನ್ನುವಂತಹ ಸ್ಥಿತಿಯಲ್ಲಿ ಮಹಿಳೆಯರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಮಹಿಳಾ ಶಿಕ್ಷಣಕ್ಕೆ ಬೆಳವಣಿಗೆಯ ದಿಕ್ಕು ತೋರಿಸಿದ್ದು ಸಾವಿತ್ರಿಬಾಯಿ ಫುಲೆ ದಂಪತಿ ವಿಶೇಷತೆ ಎಂದು ಲೇಖಕ ಜಿ.ಟಿ.ಸತ್ಯನಾರಾಯಣ ಕರೂರು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗ, ಐಕ್ಯುಎಸಿ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಜಾತಿಯ ಶ್ರೇಣಿಕೃತ ವ್ಯವಸ್ಥೆಯು ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸುವ ಮೂಲಕ ಯಥಾಸ್ಥಿತಿ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದ ವೇಳೆಯಲ್ಲಿ ತಮ್ಮದೇ ಆದ ಪ್ರತಿರೋಧ ಶೈಲಿಯಲ್ಲಿ ಮಹಿಳಾ ಶಿಕ್ಷಣಕ್ಕೆ ದಾರಿ ತೋರಿಸಿದ್ದು ಫುಲೆ ದಂಪತಿ ಎಂಬುದನ್ನು ಮರೆಯುವಂತಿಲ್ಲ ಎಂದರು.
ಧರ್ಮದ ಕಟ್ಟುಪಾಡಿನ ಹೆಸರಿನಲ್ಲಿ ಮಹಿಳೆಯರನ್ನು ಹಲವು ವರ್ಷಗಳಿಂದ ಶಿಕ್ಷಣ ವಂಚಿತರನ್ನಾಗಿ ಮಾಡಲಾಗಿತ್ತು. ಈ ಮೂಲಕ ಭಾರತದ ಜಾತಿ ವ್ಯವಸ್ಥೆಯು ಜ್ಞಾನವನ್ನು ಕೆಲವರಿಗೆ ಮಾತ್ರ ಸೀಮಿತ ಮಾಡಿದ್ದ ಹುನ್ನಾರವನ್ನು ವಿಫಲಗೊಳಿಸಿದ್ದು ಸಾವಿತ್ರಿಬಾಯಿ ಫುಲೆ ಅವರ ವಿಶೇಷತೆ ಎಂದು ಅವರು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಸಣ್ಣಹನುಮಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಕುಂಸಿ ಉಮೇಶ್ ಇದ್ದರು. ಎಸ್.ಎಂ.ಗಣಪತಿ ಸ್ವಾಗತಿಸಿದರು. ಸುರೇಶ್ ವಂದಿಸಿದರು. ನಂದಿನಿ, ಚಂದ್ರಕಲಾ ನಿರೂಪಿಸಿದರು.