ಶಿವಮೊಗ್ಗ: ನಾಪತ್ತೆಯಾಗಿದ್ದ ಡಿಸಿ ಕಚೇರಿ ಗಿರಿರಾಜ್ ಧರ್ಮಸ್ಥಳದಲ್ಲಿ ಪತ್ತೆ

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರ ನಿಧಿಯ ನಿರ್ವಹಣಾ ವಿಭಾಗ ನೋಡಿಕೊಳ್ಳುತ್ತಿದ್ದ ಪ್ರಥಮ ದರ್ಜೆ ಸಹಾಯಕ ಗಿರಿರಾಜ್ (39) ಸೆ.28ರಂದು ಬೆಳಿಗ್ಗೆ ಮನೆಯಿಂದ ಹೊರಟವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಚೇರಿ ಸಹೋದ್ಯೋಗಿಗಳಿಗೆ ಸಂದೇಶ ಕಳುಹಿಸಿದ್ದರು. ನಂತರ ಅವರ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
‘ನನ್ನನ್ನು ಯಾರೂ ಹುಡುಕುವ ಪ್ರಯತ್ನ ಮಾಡಬೇಡಿ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿದ್ದೇನೆ’ ಎಂದು ಸಂದೇಶದಲ್ಲಿ ನಮೂದಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿನ ಕೆಲಸದ ಒತ್ತಡ, ಸರ್ಕಾರಿ ವ್ಯವಸ್ಥೆಯಲ್ಲಿನ ಲೋಪ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಕೊರತೆ, ಕೆಲಸದ ಒತ್ತಡಗಳ ಮಧ್ಯೆ ಕುಟುಂಬದ ಸದಸ್ಯರಿಗೆ ಸಮಯ ನೀಡಲು ಸಾಧ್ಯವಾಗದಿರುವುದು, ಕೆಳ ಹಂತದ ಅಧಿಕಾರಿಗಳನ್ನು ಹೇಗೆ ಬಲಿಪಶು ಮಾಡಲಾಗುತ್ತದೆ ಎಂಬ ಅಂಶಗಳನ್ನು ಸವಿಸ್ತಾರವಾಗಿ ಬರೆದಿದ್ದರು.
ಇದನ್ನೂ ಓದಿ... ನನ್ನ ಸಾವಿಗೆ ಶಾಲಿನಿ ರಜನೀಶ್ ಕಾರಣ; ಡೆತ್ನೋಟ್ ಬರೆದಿಟ್ಟು ಸಿಬ್ಬಂದಿ ನಾಪತ್ತೆ
ಕುಟುಂಬದ ಸದಸ್ಯರು ಜಯನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಗಿರಿರಾಜ್ ಅವರ ಪತ್ತೆಗೆ ಸಾಕಷ್ಟು ಹುಡುಕಾಟ ನಡೆಸಿದ್ದರು.
‘ಧರ್ಮಸ್ಥಳದಲ್ಲಿ ಇರುವುದು ದೃಢಪಟ್ಟಿದೆ. ಕಂದಾಯ ಇಲಾಖೆಯ ನೌಕರರು, ಸ್ಥಳೀಯ ಪೊಲೀಸರು ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.