ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಸೆ. 18ರ ಸಂಜೆ 7ಕ್ಕೆ ನಂದಿನಿ ಮಲ್ಲಿಕಾರ್ಜುನ ಅಭಿನಯದ ಏಕವ್ಯಕ್ತಿ ನಾಟಕ ‘ನಿರಾಕರಣೆ' ಪ್ರದರ್ಶನವಾಗುತ್ತಿದೆ.
ಹೊಂಗಿರಣ ಸಂಸ್ಥೆ ‘ಬೆಳ್ಳಿ ಹೆಜ್ಜೆ ರಂಗಪಯಣ–7’ರ ಅಂಗವಾಗಿ ಈ ಪ್ರದರ್ಶನ ಆಯೋಜಿಸಿದೆ. ಎಂದು ನಾಟಕದ ನಿರ್ದೇಶಕ ಡಾ. ಸಾಸ್ವೆಹಳ್ಳಿ ಸತೀಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಕ್ಕಳ ರಂಗಚಟುವಟಿಕೆ ಬೆಳೆಸಲು 1996ರಲ್ಲಿ ಹೊಂಗಿರಣ ತಂಡ ಸ್ಥಾಪನೆಯಾಗಿತ್ತು. ಈಗ 25ನೇ ವರ್ಷಕ್ಕೆ ಕಾಲಿಟ್ಟಿದೆ. ರಂಗ ಕಾಯಕದಲ್ಲಿ ಎಲೆಮರೆಯ ಕಾಯಿಯಂತೆ ಇರುವ ಪ್ರತಿಭಾವಂತ ಕಲಾವಿದೆ ನಂದಿನಿ ಮಲ್ಲಿಕಾರ್ಜುನ್ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವಿವಿಧ ಮಹಿಳಾ ಸಂಘಟನೆಗಳಲ್ಲಿ ಕೆಲಸ ಮಾಡಿದ್ದಾರೆ. ಏಕವ್ಯಕ್ತಿ ನಾಟಕ ಮಾಡಬೇಕು ಎಂದು ಹಂಬಲಿಸುತ್ತಿದ್ದರು. ಈಗ ಅವರ ಕನಸು ಸಾಕಾರಗೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ನಿರಾಕರಣೆ’ ವೀಣಾ ಕಾಂತೇಶ್ವರ ಅವರ ಕತೆ ಆಧಾರಿತ ನಾಟಕ. ಹರಿಗೆ ಗೋಪಾಲಸ್ವಾಮಿ ಅವರ ಬೆಳಕು, ಗಣೇಶ್ರಾವ್ ಎಲ್ಲೂರು ಅವರ ಸಂಗೀತವಿದೆ. ಪ್ರವೇಶ ಎಲ್ಲರಿಗೂ ಉಚಿತ ಎಂದು ವಿವರ ನೀಡಿದರು.