ಸಾಗರ: ಕೆಳದಿ ಸಾಮ್ರಾಜ್ಯವನ್ನು 25 ವರ್ಷಗಳಿಗೂ ಹೆಚ್ಚು ಕಾಲ ಆಳುವ ಮೂಲಕ ದಾಖಲೆ ನಿರ್ಮಿಸಿರುವ ರಾಣಿ ಚನ್ನಮ್ಮಾಜಿ ಹೆಸರಿನಲ್ಲಿ ಕೆಳದಿಯಲ್ಲಿ ಅಧ್ಯಯನ ಪೀಠ ಸ್ಥಾಪಿಸುವ ಉದ್ದೇಶವಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ವೀರಭದ್ರಪ್ಪ ಹೇಳಿದರು.
ತಾಲ್ಲೂಕಿನ ಕೆಳದಿ ಗ್ರಾಮದ ಕೆಳದಿ ವಸ್ತು ಸಂಗ್ರಹಾಲಯ ಮತ್ತುಸಂಶೋಧನಾ ಕೇಂದ್ರಕ್ಕೆ ಈಚೆಗೆ ಭೇಟಿ ನೀಡಿ ಮಾತನಾಡಿದ ಅವರು,ಇತಿಹಾಸದ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಕೆಳದಿ ವಸ್ತು ಸಂಗ್ರಹಾಲಯ ಕುವೆಂಪು ವಿಶ್ವವಿದ್ಯಾಲಯದ ಸುಪರ್ದಿಯಲ್ಲಿರುವುದು ಹೆಮ್ಮೆಯ ಸಂಗತಿ’ ಎಂದರು.
ಕುವೆಂಪು ವಿವಿ ಕುಲಸಚಿವೆ ಅನುರಾಧಾ, ‘ಕೆಳದಿಯ ವಸ್ತು ಸಂಗ್ರಹಾಲಯ ಇತಿಹಾಸ ಸಂಶೋಧನಾ ವಿದ್ಯಾರ್ಥಿಗಳಿಗೆ ಅಧ್ಯಯನ ಕೈಗೊಳ್ಳಲು ಸೂಕ್ತ ಸ್ಥಳವಾಗಿದೆ. ಯುವ ಸಂಶೋಧನಾರ್ಥಿಗಳು ಇಲ್ಲಿನ ವಸ್ತು ಸಂಗ್ರಹಾಲಯದ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.
ಕೆಳದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಹಾರೆಗೊಪ್ಪ, ವಸ್ತು ಸಂಗ್ರಹಾಲಯದ ಕ್ಯುರೇಟರ್ ಡಾ.ಕೆಳದಿ ವೆಂಕಟೇಶ್ ಜೋಯಿಸ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯೆ ಡಾ.ಕಿರಣ್ ದೇಸಾಯಿ, ರಮೇಶ್ ಬಾಬು, ರಾಮಲಿಂಗಪ್ಪ, ನಾಗರಾಜ್ ಇದ್ದರು.