ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೀರ್ಥಹಳ್ಳಿ: 9 ಸರ್ಕಾರಿ ಶಾಲೆಗಳಿಗಿಲ್ಲ ಕಾಯಂ ಶಿಕ್ಷಕರು

Published 28 ಮೇ 2024, 7:18 IST
Last Updated 28 ಮೇ 2024, 7:18 IST
ಅಕ್ಷರ ಗಾತ್ರ

ತೀರ್ಥಹಳ್ಳಿ: 2024– 25ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ತಾಲ್ಲೂಕಿನಲ್ಲಿ 27 ಸರ್ಕಾರಿ ಪ್ರೌಢಶಾಲೆಗಳು, 88 ಕಿರಿಯ, 116 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಅದರಲ್ಲಿ 436 ಶಿಕ್ಷಕರು ಪ್ರಾಥಮಿಕ ಶಾಲೆಗಳಲ್ಲೂ, 182 ಶಿಕ್ಷಕರು ಪ್ರೌಢಶಾಲೆಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಖ್ಯೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಕಾಯಂ ಶಿಕ್ಷಕರಿಲ್ಲದೆ ಅನೇಕ ಗ್ರಾಮೀಣ ಪ್ರದೇಶದ ಶಾಲೆಗಳು ಕಳೆಗುಂದಿವೆ.

ತಾಲ್ಲೂಕಿನ 9 ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ. ಹೋಗಾಗಿ ಶೂನ್ಯ ಶಿಕ್ಷಕರಿರುವ ಶಾಲೆಗಳ ಪ್ರಾರಂಭೋತ್ಸವಕ್ಕೆ ಆರಂಭಿಕ ವಿಘ್ನ ಎದುರಾಗಿದೆ.

ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ವಿಳಂಬಗೊಂಡಿದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷದ ಶೈಕ್ಷಣಿಕ ಅವಧಿ ಪ್ರಾರಂಭಕ್ಕೂ ಮುನ್ನವೇ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಂಡಿತ್ತು. ತೀರ್ಥಹಳ್ಳಿಯಲ್ಲಿ ಒಟ್ಟು 118 ಅತಿಥಿ ಶಿಕ್ಷಕರನ್ನು ನೇಮಿಸಲಾಗಿತ್ತು. ಪ್ರಸ್ತುತ ಅಂದಾಜು 110 ಅತಿಥಿ ಶಿಕ್ಷಕರು ಅಗತ್ಯ ಇದ್ದು, ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಅವಧಿಗೆ ಅಡೆತಡೆ ಉಂಟಾಗುವ ಸಾಧ್ಯತೆ ಹೆಚ್ಚಿದೆ.

‘ಸರ್ಕಾರವೇ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ. ಗೊಂದಲಗಳಿಂದಾಗಿ ಖಾಸಗಿ ಶಾಲೆಗಳಿಗೆ ಲಾಭವಾಗುತ್ತಿದೆ. ಮಾದರಿ ಶಾಲೆಯ ಭರವಸೆ ಹುಸಿಯಾಗಿದೆ. ಶಿಕ್ಷಕರಿಲ್ಲದೇ ಶಾಲೆ ಹೇಗೆ ತೆರೆಯಬೇಕು?, ಒಬ್ಬಶಿಕ್ಷಕ ಎಲ್ಲ ವಿಷಯ ಪಾಠ ಮಾಡುವುದಾದರೂ ಹೇಗೆ?, ಆರ್ಥಿಕವಾಗಿ ಹೊರೆಯಾದರೂ ಪರವಾಗಿಲ್ಲ ಎಂದೇ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ನಿರ್ಧಾರಿಸಿದ್ದೇನೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಪಾಲಕರೊಬ್ಬರು ಹೇಳಿದರು.

ಶಾಲೆ ಸ್ವಚ್ಛತೆ ಸವಾಲು:

ಎರಡು ತಿಂಗಳಿನಿಂದ ಮುಚ್ಚಿರುವ ಸರ್ಕಾರಿ ಶಾಲೆಗಳ ಆವರಣ ಮತ್ತು ಕೊಠಡಿಗಳನ್ನು ಸ್ವಚ್ಛಗೊಳಿಸುವ ಸವಾಲು ಈಗ ಶಿಕ್ಷಕರಿಗೆ ಎದುರಾಗಿದೆ. ವಿದ್ಯಾರ್ಥಿಗಳನ್ನು ಸ್ವಚ್ಛತೆ ಕಾರ್ಯಕ್ಕೆ ಬಳಸಿದರೆ ಸಮಸ್ಯೆ ಎದುರಾಗಲಿದೆ. ಈ ಕಾರ್ಯಕ್ಕೆ ಪಾಲಕರೂ ಕೈಜೋಡಿಸುತ್ತಿಲ್ಲ. ಕಾರ್ಮಿಕರಿಂದ ಸ್ವಚ್ಛಗೊಳಿಸಲು ಹಣ ಇಲ್ಲ ಅಥವಾ ದುಬಾರಿ ಹಣ ತೆರಬೇಕಾದ ಕ್ಲಿಷ್ಟ ವಾತಾವರಣ ನಿರ್ಮಾಣವಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಮನವೊಲಿಸಿ ಶಾಲೆಗೆ ಕರೆತರುವ ಪ್ರಯತ್ನವೂ ನಡೆಯುತ್ತಿರುವುದರಿಂದ ಭಿನ್ನ ಸವಾಲು ನಿರ್ವಹಿಸುವ ಗೊಂದಲ ಏರ್ಪಟ್ಟಿದೆ ಎಂದು ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

ಮಲೆನಾಡು ಭಾಗಕ್ಕೆ ಶಿಕ್ಷಣ ಇಲಾಖೆ ಗಮನ ಕೊಡಬೇಕು.ಶಿಕ್ಷಕರನ್ನು ಡೆಪ್ಯೂಟೇಷನ್‌ ಮೇಲೆ ಕಳುಹಿಸಿದರೆ ಸಮಸ್ಯೆ ಇತ್ಯರ್ಥವಾಗದು. ಬೋಧನೆಗೆ ತೊಂದರೆಯಾಗಲಿದೆ.
ನಿತ್ಯಾನಂದ ಎಸ್‌ಡಿಎಂಸಿ ಅಧ್ಯಕ್ಷ ಸರ್ಕಾರಿ ಶಾಲೆ ಹೊನ್ನೇತ್ತಾಳು
ಮುಖೋಪಾಧ್ಯಾಯರ ಸಭೆ ನಡೆಸಿ ಸೂಚಿಸಿದ್ದೇನೆ. ಯಾವ ಶಾಲೆಯ ಆರಂಭಕ್ಕೂ ಸಮಸ್ಯೆಗಳಿಲ್ಲ. 29 30ರಂದು ಪ್ರಾರಂಭೋತ್ಸವ ನಡೆಯಲಿದೆ.
ಗಣೇಶ್‌ ವೈ ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT