ತೀರ್ಥಹಳ್ಳಿ: ‘ದೇಶದಲ್ಲಿ 5 ಕೋಟಿಗೂ ಹೆಚ್ಚು ಸರ್ಕಾರಿ ಉದ್ಯೋಗ ಖಾಲಿ ಇದೆ. ಹಣ ಉಳಿಸುವ ನೆಪದಲ್ಲಿ ನೇಮಕಾತಿ ಮಾಡಿಕೊಳ್ಳದಿದ್ದರೆ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಪಟ್ಟಣ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ತಾಲ್ಲೂಕು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ಹಮ್ಮಿಕೊಂಡಿದ್ದ 7ನೇ ತಾಲ್ಲೂಕು ಸಮಾವೇಶದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಸಾಮಾಜಿಕ, ಆರ್ಥಿಕ ವ್ಯತ್ಯಾಸ ಬಹಳ ಇದೆ. 3ರಿಂದ 18ನೇ ವಯೋಮಾನದ ಎಲ್ಲಾ ವಿದ್ಯಾರ್ಥಿಗಳಿಗೂ ಸರ್ಕಾರಿ ಶಿಕ್ಷಣ ಲಭಿಸಬೇಕು. ಖಾಸಗಿ ಶಿಕ್ಷಣವನ್ನುಸರ್ಕಾರದ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಶ್ರೀಮಂತ, ಮಧ್ಯಮ, ಬಡವರ ವರ್ಗದವರ ಭಾರತ ನಿರ್ಮಾಣವಾಗಲಿದೆ ಎಂದರು.
‘ಕೆಲಸಕ್ಕೆ ಸರಿಯಾಗಿ ಕೂಲಿ ಇಲ್ಲದಿದ್ದರೆ ಜೀತ ಮಾಡಿಸಿಕೊಂಡಂತೆ ಆಗುತ್ತದೆ. ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ನಾನು ಅಂಗನವಾಡಿ ಕಾರ್ಯಕರ್ತೆಯರ ಪರ ನಿಲ್ಲುತ್ತೇನೆ. ಪಿಎಚ್ಡಿ ಮಾಡಿದವರಿಗೂ ಸರಿಯಾದ ಗೌರವಧನ ಸಿಗುತ್ತಿಲ್ಲ. 20 ವರ್ಷ ಸೇವೆ ಮಾಡಿದವರಿಗೆ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ’ ಎಂದು ಹೇಳಿದರು.
ಅಂಗನವಾಡಿ ಕೇಂದ್ರ ಸರ್ಕಾರದ ಕಾರ್ಯಕ್ರಮ. ಸರ್ಕಾರಿ ನೌಕರಿ ಭರ್ತಿ ಮಾಡುವುದು ಕೇಂದ್ರದ ಕೈಯಲ್ಲಿದೆ. ಎನ್ಇಪಿ ಜಾರಿ ಮಾಡಿದ್ದರೂ ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಕರಾಗಲು ಸಾಧ್ಯವಿಲ್ಲ. ಬೀದಿಗಳನ್ನು ಸುತ್ತಬೇಕಾಗಿದೆ. ಪುಟಾಣಿಗಳಿಗೆ ಉತ್ತಮ ಶಿಕ್ಷಣ ನೀಡಲು ಆಗುತ್ತಿಲ್ಲ. ಸರ್ಕಾರದ ಯೋಜನೆ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೂ ಪ್ರೋತ್ಸಾಹಧನ ಸಿಗುತ್ತಿಲ್ಲ. ಸರ್ಕಾರ ವಹಿಸಿರುವ ಮತಗಟ್ಟೆ ಮಟ್ಟದ ಅಧಿಕಾರದಿಂದ (ಬಿಎಲ್ಒ) ಮುಕ್ತಗೊಳಿಸಬೇಕು ಎಂದು ಎಐಟಿಯುಸಿ ತಾಲ್ಲೂಕು ಅಧ್ಯಕ್ಷೆ ಗಾಯತ್ರಿ ಒತ್ತಾಯಿಸಿದರು.
ತಹಶೀಲ್ದಾರ್ ಅಮೃತ್ ಅತ್ರೇಶ್, ತಾಲ್ಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಡಾಕಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ, ಸಿಡಿಪಿಒ ಶಶಿರೇಖಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ, ರಾಜ್ಯ ಸಂಚಾಲಕ ರವೀಂದ್ರ ಸಾಗರ್ ಇದ್ದರು.