ತುಮಕೂರು: ನಗರದ ಅಮರಜ್ಯೋತಿ ನಗರದ ನಿವಾಸಿ ಕೆ.ಎಲ್.ಸುರೇಶ್ ಎಂಬುವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ₹12 ಲಕ್ಷ ನಗದು, ₹44 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ಸುರೇಶ್ ಅಶೋಕ ರಸ್ತೆಯಲ್ಲಿರುವ ಸೂಪರ್ ಪಬ್ನ ಮಾಲೀಕರು. ಜೂನ್ 1ರಂದು ಕುಟುಂಬ ಸಮೇತ ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಬಾಗೇಶಪುರ ಗ್ರಾಮದ ದೇವಸ್ಥಾನಕ್ಕೆ ಹೋಗಿದ್ದರು. ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಯ ಕಿಟಕಿಯ ಗಾಜು ಹೊಡೆದು ಒಳ ನುಗ್ಗಿದ್ದಾರೆ. ನಗದು, ಆಭರಣ ಕದ್ದು ಪರಾರಿಯಾಗಿದ್ದಾರೆ.
ಚಿನ್ನದ ಹಾರ, ಓಲೆಗಳು, ಮುತ್ತಿನ ಹಾರ, ಉಂಗುರ, ಬಂಗಾರದ ಕಡಗ ಮತ್ತು ಇತರೆ ಆಭರಣಗಳು ಕಳ್ಳತನವಾಗಿವೆ. ಸುರೇಶ್ ಕುಟುಂಬದವರು ಸೋಮವಾರ ವಾಪಸ್ ಬಂದು ನೋಡಿದಾಗ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.