ಕುಣಿಗಲ್: ಟಿವಿ, ಮೊಬೈಲ್ ಯುಗದಲ್ಲಿ ರಂಗಭೂಮಿ ಉಳಿಯಬೇಕಾದರೆ ಗ್ರಾಮೀಣ ಪ್ರದೇಶದ ಕಲಾವಿದರಿಗೆ ನಾಟಕ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಬೇಕಿದೆ ಎಂದು ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದರು.
ಸ್ಥಳೀಯ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪರ್ವತಾಂಜನೇಯ ಕಲಾ ಬಳಗದಿಂದ ಮಂಗಳವಾರದಿಂದ ನಡೆದ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ರಂಗಭೂಮಿ ಕಲಾವಿದರು ಕಲಾ ಸೇವೆಗಾಗಿ ತ್ಯಾಗ ಮಾಡಿದ್ದಾರೆ. ತಾಲ್ಲೂಕಿನ ಪ್ರತಿಭೆಗಳಿಗೆ ಅವಕಾಶ ನೀಡುವ ಜೊತೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ 6 ದಿನ ನಿರಂತರ ನಾಟಕೋತ್ಸವ ನಡೆಯುತ್ತಿದೆ ಎಂದು ಹೇಳಿದರು.
ಬೆಂಗಳೂರಿನ ಕಮಲೇಶ್, ಗ್ರಾಮೀಣ ಪ್ರದೇಶದ ರಂಗಭೂಮಿ ಕಲಾವಿದರು ಪೌರಾಣಿಕ ನಾಟಕ ಪ್ರದರ್ಶನದ ಜತೆ ಸಾಮಾಜಿಕ, ಐತಿಹಾಸಿಕ ಮತ್ತು ಪ್ರಚಲಿತ ವಿದ್ಯಾಮಾನ, ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ನಾಟಕ ಪ್ರದರ್ಶನಕ್ಕೂ ಗಮನಹರಿಸಲು ಸಲಹೆ ನೀಡಿದರು.
ಪರ್ವತಾಂಜನೇಯ ಕಲಾ ಬಳಗದ ಜೆ.ಸಿ.ಪಿ.ಪಾಪಣ್ಣ , ತಾಲ್ಲೂಕಿನಲ್ಲಿ ಸಾವಿರಾರು ರಂಗಭೂಮಿ ಕಲಾವಿದರು ಇದ್ದಾರೆ. ಕಲಾ ಪ್ರತಿಭೆ ಪ್ರದರ್ಶನಕ್ಕೆ ಹೊರ ಊರುಗಳಿಗೆ ಹೋಗುತ್ತಿದ್ದು, ಸ್ಥಳೀಯವಾಗಿ ಅವಕಾಶ ಕಲ್ಪಿಸುವುದರ ಜೊತೆಗೆ ಹಿರಿಯ ಕಲಾವಿದರ ಸೇವೆ ಗುರುತಿಸುವ ಉದ್ದೇಶದಿಂದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಹಿರಿಯ ಕಲಾವಿದ ಸೊಬಾಗನಹಳ್ಳಿ ನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಚಲುವರಾಜು, ಹರೀಶ್ ನಾಯಕ್, ಲಕ್ಷ್ಮೀಕಾಂತ, ಸಿದ್ದಗಂಗಯ್ಯ ಸುರೇಶ್ ಪಾಲ್ಗೊಂಡಿದ್ದರು.