ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಗಂಗೋನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆಂಬಳಲು ಪಾಳ್ಯದಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಾಗಿ ಗೆಲುವು ಸಾಧಿಸಿರುವ ರವಿ ಎಂಬುವರನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಸುರೇಶ್ಗೌಡ ಬಿಜೆಪಿಗೆ ಆಹ್ವಾನಿಸಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಈ ವಿಚಾರವಾಗಿ ಜೆಡಿಎಸ್ ಕಾರ್ಯಕರ್ತರು ತಮ್ಮ ಫೇಸ್ಬುಕ್ ಖಾತೆಗಳಲ್ಲಿ ಸುರೇಶ್ಗೌಡ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಆಡಿಯೊದಲ್ಲಿ ಏನಿದೆ: ‘ಅವನು ಯಾರೂ ಇದ್ದಾನಲ್ಲ ಸೊಸೈಟಿಯವನು ನಾಸಿರ್ ಮತ್ತು ಅಡವಿ ನಡುವೆ ನೀವು ರಾಜಕೀಯ ಮಾಡಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಇದ್ದರೆ ರಾಜನಂತೆ ಇರುವೆ. ನಿನ್ನೇ ಅಧ್ಯಕ್ಷನನ್ನಾಗಿ ಮಾಡುತ್ತೇವೆ’ ಎಂದು ಸುರೇಶ್ಗೌಡರು ರವಿಗೆ ಹೇಳಿದ್ದಾರೆ.
‘ನನ್ನ ಗರಡಿಯಲ್ಲಿ 10 ವರ್ಷ ಬೆಳೆದಿದ್ದೀಯಾ’ ಎಂದು ಸುರೇಶ್ಗೌಡ ಹೇಳಿದಾಗ, ‘ಹೌದು, ಮುದ್ದಹನುಮೇಗೌಡರನ್ನು ಬಿಟ್ಟರೆ, ನಾವು ನಿಮ್ಮ ಜತೆ ಬೆಳೆದಿದ್ದು’ ಎಂದು ರವಿ ಹೇಳಿದ್ದಾರೆ.
‘ಏನು ನಿರ್ಧಾರ ಮಾಡುತ್ತಿಯೋ ಮಾಡು. ಎಲ್ಲಾದರೂ ಸಿಕ್ಕು ಮಾತನಾಡೋಣ. ನಿನ್ನೇ ಅಧ್ಯಕ್ಷನನ್ನಾಗಿ ಮಾಡುತ್ತೇವೆ. ಬಾ ನನ್ನ ಜತೆ’ ಎಂದಿದ್ದಾರೆ.
ಗಂಗೋನಹಳ್ಳಿ ಪಂಚಾಯಿತಿ ಭಾಗದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಈ ಕಾರಣದಿಂದ ಜೆಡಿಎಸ್ ಬೆಂಬಲಿತ ಸದಸ್ಯರಿಗೆ ಆಮಿಷವೊಡ್ಡಿ ಬಿಜೆಪಿಗೆ ಸೆಳೆಯಲಾಗುತ್ತಿದೆ ಎಂದು ಜೆಡಿಎಸ್ ಮುಖಂಡರು ದೂರುತ್ತಿದ್ದಾರೆ.