ಗುಬ್ಬಿ: ‘ರ್ಯಾಪಿಡ್ ಪರೀಕ್ಷಾ ಕಿಟ್ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾರ್ವಜನಿಕರು ಮತ್ತು ಅನೇಕ ರಾಜಕೀಯ ಪಕ್ಷಗಳ ಮುಖಂಡರು ಆರೋಪಿಸಿದ್ದಾರೆ. ಸರ್ಕಾರ ಪ್ರಾಮಾಣಿಕವಾಗಿ ಕೊಂಡುಕೊಂಡಿದೆ ಎಂಬುದಾದರೆ ಸೂಕ್ತ ತನಿಖೆ ಮಾಡಿ ರಾಜ್ಯದ ಜನತೆಗೆ ಉತ್ತರ ನೀಡಬೇಕು’ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಕಲ್ಲ ಹರದಗೆರೆ ಗ್ರಾಮದಲ್ಲಿ ಸುಮಾರು ₹22 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮತ್ತು ಕೊಠಡಿ ದುರಸ್ತಿಗಾಗಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಸರ್ಕಾರ ಅಕ್ರಮವಾಗಿ ಖರೀದಿ ಮಾಡಿದೆ ಎಂದಾದರೆ ಯಾವುದೇ ತನಿಖೆಗೆ ಮುಂದಾಗುವುದಿಲ್ಲ. ಯಾವುದಕ್ಕೂ ಸರ್ಕಾರವೇ ಸತ್ಯ ಹೇಳಬೇಕು’ ಎಂದರು.
ತಾಲ್ಲೂಕಿನಲ್ಲಿ ರಸ್ತೆ ಕಾಮಗಾರಿಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಲು ಕಾರಣ ಕೋವಿಡ್ ಹಾಗೂ ಕಳೆದ ಬಾರಿ ಉಂಟಾದ ಪ್ರವಾಹದಿಂದ ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡಿದ್ದ ಅನುದಾನದ ಹಣವನ್ನು ಹಿಂಪಡೆದುಕೊಂಡಿರುವುದು ಎಂದು ತಿಳಿಸಿದರು.
ಕಲ್ಲ ಹರದಗೆರೆ ಗ್ರಾಮದ ನಿವೃತ್ತ ಮುಖ್ಯಶಿಕ್ಷಕ ಶಿವಾನಂದಯ್ಯ 12 ಕುಂಟೆ ಜಮೀನನ್ನು ಶಾಲಾ ಕಟ್ಟಡ ನಿರ್ಮಾಣಕ್ಕೆ ಉಚಿತವಾಗಿ ದಾನ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಯಶೋಧಮ್ಮ, ಗ್ರಾ.ಪಂ ಸದ್ಯ ಸಚ್ಚಿದಾನಂದ ಮೂರ್ತಿ, ಬಿಇಒ ಸೋಮಶೇಖರ್, ಬಿಆರ್ಸಿ ಸಿದ್ಧಲಿಂಗಸ್ವಾಮಿ, ಮುಖ್ಯಶಿಕ್ಷಕರಾದ ದೇವರಾಜು, ಷಡಾಕ್ಷರಿ, ಶಿವಕುಮಾರ್, ಪಾಲನೇತ್ರಯ್ಯ, ಮಹಾಲಿಂಗಣ್ಣ, ಕುಮಾರ್ ಸುರೇಶ್, ಶೇಖರ್ ಮಠಪತಿ ಭಾಗವಹಿಸಿದ್ದರು.