ತುಮಕೂರು: ನಗರದ ನಜರಾಬಾದ್ ಕಾಲೊನಿ ಹಾಗೂ ಸದಾಶಿವನಗರದಲ್ಲಿ ಗುರುವಾರ ನಾಯಿಗಳ ಗುಂಪು ದಾಳಿ ನಡೆಸಿದ್ದು 10ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.
ಮಧ್ಯಾಹ್ನ ನಜರಾಬಾದ್ ಸ್ಮಶಾನದ ಹಿಂಭಾಗ ಮಸೀದಿ ರಸ್ತೆಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ಆಗ ನಾಯಿಗಳ ಹಿಂಡು ದಾಳಿ ನಡೆಸಿವೆ. ಸದಾಶಿವನಗರದಲ್ಲಿಯೂ ಆಟವಾಡುತ್ತಿದ್ದ ಮಕ್ಕಳಿಗೆ ನಾಯಿಗಳು ಕಚ್ಚಿವೆ.
ಹೀಗೆ ದಿಢೀರ್ ನಡೆದ ದಾಳಿಯಿಂದ ನಾಗರಿಕರು ಮತ್ತು ಪೋಷಕರು ಬೆಚ್ಚಿಬಿದ್ದಿದ್ದಾರೆ. ಮಕ್ಕಳನ್ನು ತಕ್ಷಣವೆ ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಈ ಭಾಗದಲ್ಲಿ ಹಂದಿಗಳ ಓಡಾಟ ಹೆಚ್ಚಿದೆ. ಹಂದಿಗಳ ಮೇಲೆ ದಾಳಿ ನಡೆಸುತ್ತಿದ್ದ ನಾಯಿಗಳು ಈಗ ಮಕ್ಕಳ ಮೇಲೆ ದಾಳಿ ನಡೆಸಿವೆ.
‘ಚಿಕ್ಕ ಮಕ್ಕಳು, ವಯಸ್ಸಾದವರು ಒಬ್ಬರೇ ಓಡಾಡಲು ಆಗದಂತಹ ಸ್ಥಿತಿ ಇದೆ. ಗುಂಪು ಗುಂಪಾಗಿ ಬರುವ ನಾಯಿಗಳು ಏಕಾ ಏಕಿ ದಾಳಿ ಮಾಡುತ್ತಿವೆ. ಪಾಲಿಕೆ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳದೆ ಇದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಿಪಿಎಂ ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ ಎಚ್ಚರಿಸಿದ್ದಾರೆ.
‘ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಬೇಕು. ಗಾಯಗೊಂಡ ಮಕ್ಕಳ ಚಿಕಿತ್ಸೆ ವೆಚ್ಚವನ್ನು ಪಾಲಿಕೆಯೇ ಭರಿಸಬೇಕು’ ಎಂದು ಒತ್ತಾಯಿಸಿದ್ದಾರೆ.