ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಅರೇಮಲ್ಲೇನಹಳ್ಳಿ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಶು ಸಂಗೋಪನಾ ಇಲಾಖೆಯಿಂದ ಮೇವು ಬ್ಯಾಂಕ್ ಸ್ಥಾಪನೆಗೆ ಸೋಮವಾರ ಚಾಲನೆ ನೀಡಲಾಯಿತು.
ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಕಳೆದ ನವೆಂಬರ್ನಿಂದ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗದೆ ರೈತರು ಪರದಾಡಿದರು. ಈ ಭಾಗದ ರೈತರು ಮೇವಿಗಾಗಿ ಪರಿತಪಿಸಿದರು. ಸರ್ಕಾರ ನೀಡಿರುವ ಮೇವು ಬ್ಯಾಂಕ್ ಸೌಲಭ್ಯವನ್ನು ರೈತರು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದರು.
ಎರಡು ದಿನಗಳಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ರೈತರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದರು.
ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೇವಣ ಸಿದ್ಧಪ್ಪ ಮಾತನಾಡಿ, ಒಂದು ರಾಸುವಿಗೆ ಪ್ರತಿ ದಿನಕ್ಕೆ 6 ಕೆ.ಜಿಯಂತೆ ವಾರಕ್ಕೆ ಆಗುವಷ್ಟು ಮೇವನ್ನು ಒಂದೇ ಬಾರಿ ನೀಡಲಾಗುತ್ತದೆ. ರೈತರು ತಮ್ಮಲ್ಲಿರುವ ರಾಸುಗಳ ಲೆಕ್ಕದಲ್ಲಿ ಮೇವು ಪಡೆಯಬಹುದಾಗಿದೆ. ಅದಕ್ಕಾಗಿ ಪ್ರತಿ ಕೆ.ಜಿಗೆ ₹2 ಸಂದಾಯ ಮಾಡಬೇಕಿದೆ ಎಂದರು.
ಮುಖ್ಯ ಪಶುವೈದ್ಯಾಧಿಕಾರಿ ಡಾ.ಶಶಿಕಿರಣ್, ಜಾನುವಾರು ಅಭಿವೃದ್ಧಿ ಅಧಿಕಾರಿ ಸಿದ್ಧಪ್ಪ ಜೆ, ಹಿರಿಯ ಪಶು ವೈದ್ಯಪರಿವೀಕ್ಷಕ ಚಿಕ್ಕರಾಜು, ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಮತ್ತು ರೈತರು ಹಾಜರಿದ್ದರು.