ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ಕುಡಿಯುವ ನೀರಿನ ಘಟಕ ದುರಸ್ತಿಗೆ ಒತ್ತಾಯ

Published 1 ಜೂನ್ 2023, 15:21 IST
Last Updated 1 ಜೂನ್ 2023, 15:21 IST
ಅಕ್ಷರ ಗಾತ್ರ

ಗುಬ್ಬಿ: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಕೊರತೆಯಿಂದ ಸೊರಗಿವೆ.

ಸಂಬಂಧಿಸಿದ ಏಜೆನ್ಸಿಯವರಾಗಲಿ ಅಥವಾ ಅಧಿಕಾರಿಗಳಾಗಲಿ ಕೆಟ್ಟು ನಿಂತಿರುವ ಘಟಕಗಳನ್ನು ದುರಸ್ತಿ ಪಡಿಸದಿರುವ ವಿರುದ್ಧ ನಿಟ್ಟೂರು ಹೋಬಳಿ ಹರದೆಗೆರೆ ಗ್ರಾಮಸ್ಥರು ಗುರುವಾರ ಪ‍್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಪಾಲನೇತ್ರಯ್ಯ ಮಾತನಾಡಿ, ಸರ್ಕಾರ ನೀರಿನ ಘಟಕಗಳ ನಿರ್ವಹಣೆಯನ್ನು ಖಾಸಗಿ ಕಂಪನಿಯವರಿಗೆ ವಹಿಸಿರುವುದರಿಂದ ಪಂಚಾಯಿತಿ ಮಟ್ಟದಲ್ಲಿಯೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಘಟಕದ ಆವರಣದಲ್ಲಿ ಗಿಡ-ಗೆಂಟಿ ಬೆಳೆದಿವೆ. ಶುದ್ಧ ಕುಡಿಯುವ ನೀರು ದೊರಕದೆ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಗ್ರಾಮಸ್ಥ ರೇಣುಕಯ್ಯ ಮಾತನಾಡಿ, ನೀರಿನ ಘಟಕಗಳನ್ನು ನೆಪ ಮಾತ್ರಕ್ಕೆ ಅಳವಡಿಸಿರುವಂತಿದೆ. ಕೆಟ್ಟು ನಿಂತಿರುವ ಘಟಕ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಕುಡಿಯುವ ನೀರಿನ್ನು ಗ್ರಾಮಸ್ಥರು ಬೇರೆ ಊರುಗಳಿಗೆ ಹೋಗಿ ತರುವಂತಾಗಿದೆ. ಅಧಿಕಾರಿಗಳು ತಕ್ಷಣ ಕ್ರಮ ವಹಿಸದಿದ್ದರೆ ಪ್ರತಿಭಟನೆ ಮಾರ್ಗ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ರಮೇಶ್ ಮಾತನಾಡಿ, ಹಳ್ಳಿಗಳ ಏಳಿಗೆಗೆ ಬದ್ಧ ಎಂದು ಹೇಳುವ ಜನಪ್ರತಿನಿಧಿಗಳು ಕುಡಿಯುವ ನೀರಿನಂತಹ ಅಗತ್ಯಗಳನ್ನೂ ಪೂರೈಸುತ್ತಿಲ್ಲ. ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಪಕ್ಕದಲ್ಲಿಯೇ ಇರುವ ಈ ಘಟಕಕ್ಕೆ ಶೀಘ್ರ ಕಾಯಕಲ್ಪ ಆಗಬೇಕಿದೆ ಎಂದರು.

ಗ್ರಾಮಸ್ಥರಾದ ಕುಮಾರ್‌, ಸಿದ್ಧಲಿಂಗಸ್ವಾಮಿ, ಬಾಲಾಂಜನಪ್ಪ, ಬಿಂದುಶ್ರೀ, ಜಗದೀಶ್, ಬಸವರಾಜು, ಯತೀಶ್, ಚಂದ್ರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT