ತುಮಕೂರು: ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್ ತೀವ್ರವಾಗಿ ನೆಲ ಕಚ್ಚಿದೆ. ಆರಂಭದಿಂದಲೂ ಆ ಪಕ್ಷ ಗಮನಾರ್ಹವಾಗಿ ಮತಗಳನ್ನು ಪಡೆಯಲೇ ಇಲ್ಲ.
ಶಿರಾ ಜೆಡಿಎಸ್ನ ಪ್ರಮುಖ ನೆಲೆ ಎನಿಸಿತ್ತು. ದೇವೇಗೌಡರು, ಕುಮಾರಸ್ವಾಮಿ, ಪ್ರಜ್ವಲ್, ರೇವಣ್ಣ, ನಿಖಿಲ್ ಹೀಗೆ ಇಡೀ ಅವರ ಕುಟುಂಬವೇ ಕ್ಷೇತ್ರದಲ್ಲಿ ಬೀಡು ಬಿಟ್ಟಿತ್ತು. ಹುಲಿಕುಂಟೆ ಜವಾಬ್ದಾರಿಯನ್ನು ಪ್ರಜ್ವಲ್ ವಹಿಸಿಕೊಂಡಿದ್ದರು.
ಇಷ್ಟೆಲ್ಲ ಕಸರತ್ತು ಮಾಡಿದರೂ ಜೆಡಿಎಸ್ಗೆ ತೀವ್ರ ಹಿನ್ನಡೆ ಆಗಿದೆ. ಈ ಹಿಂದಿನ ಚುನಾವಣೆಗಳಲ್ಲಿ ಲೀಡ್ ಪಡೆದಿದ್ದ ಮತಗಟ್ಟೆಗಳಲ್ಲೇ ಉಪಚುನಾವಣೆಯಲ್ಲಿ ಜೆಡಿಎಸ್ ಮತವನ್ನು ಪಡೆದಿಲ್ಲ. ಈಗಾಗಲೇ ಜೆಡಿಎಸ್ನಿಂದ ಜಿಲ್ಲೆಯ ಹಲವು ನಾಯಕರು ಒಂದು ಕಾಲು ಹೊರಗಿಟ್ಟಿದ್ದಾರೆ. ಭದ್ರಕೋಟೆಯಲ್ಲಿನ ಸೋಲು ವಲಸೆಯನ್ನು ಹೆಚ್ಚಿಸಲಿದೆ ಎನ್ನಲಾಗುತ್ತಿದೆ.
ಬಿಜೆಪಿಗೆ ಬಲ ನೀಡಿದ ಕಾಡುಗೊಲ್ಲರು ತುಮಕೂರು: ಶಿರಾದಲ್ಲಿ ಕಾಡುಗೊಲ್ಲ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಬೆಂಬಲಿಸಿದೆ. ಆ ಸಮುದಾಯ ಹೆಚ್ಚಿರುವ ಗೌಡಗೆರೆ, ಕಳುವರಹಳ್ಳಿ, ಹುಲಿಕುಂಟೆ ಹೀಗೆ ಬಹುತೇಕ ಕಡೆಗಳಲ್ಲಿ ಬಿಜೆಪಿ ಹೆಚ್ಚು ಮತಗಳನ್ನು ಪಡೆದಿದೆ.
ಮೂರು ಅಭ್ಯರ್ಥಿಗಳು ಸಹ ಕುಂಚಿಟಿಗರೇ ಆಗಿದ್ದರು. ಈ ಸಮುದಾಯದ ನಂತರ ಶಿರಾದಲ್ಲಿ ಕಾಡುಗೊಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಕಾಡುಗೊಲ್ಲರ ಅಭಿವೃದ್ಧಿ ನಿಗಮ ರಚನೆ ಜತೆಗೆ ಈ ಸಮುದಾಯದ 40ಕ್ಕೂ ಹೆಚ್ಚು ದೇಗುಲಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು.
ಕಾಡುಗೊಲ್ಲರ ಪ್ರಮುಖ ನಾಯಕ ಚಂಗಾವರ ಮಾರಣ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಶಿರಾ ನಗರಾಭಿವೃದ್ಧಿ ಪ್ರಾಧಿಕಾರಕ್ಜೆ ಈ ಸಮುದಾಯದ ಈರಣ್ಣ ಅವರನ್ನು ಸರ್ಕಾರ ನೇಮಕ ಮಾಡಿತು.
ಗೊಲ್ಲರ ಹಟ್ಟಿಗಳ ಯುವ ಸಮುದಾಯವನ್ನು ಪ್ರಮುಖವಾಗಿ ಸೆಳೆಯಿತು.
ಕಾಂಗ್ರೆಸ್ ಕಾಡುಗೊಲ್ಲರ ಸಾಸಲು ಸತೀಶ್ ಅವರನ್ನು ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿತ್ತು. ಆದರೂ ಆ ಪಕ್ಷ ಕಾಡುಗೊಲ್ಲರ ಮತ ಸೆಳೆಯುವಲ್ಲಿ ಸೋತಿತ್ತು.