ಐತಿಹಾಸಿಕ ಹಿನ್ನೆಲೆ: ಕ್ರಿ.ಶ 800ರಲ್ಲಿ ನೊಳಂಬರು ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ಹೇಮಾವತಿ ಗ್ರಾಮವನ್ನು ರಾಜಧಾನಿಯನ್ನಾಗಿಸಿಕೊಂಡು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲ ಭಾಗಗಳನ್ನು ಆಳುತ್ತಿದ್ದರು ಎನ್ನುವುದಕ್ಕೆ ವಿವಿಧ ಶಾಸನಗಳು ಪರಾವೆಯಾಗಿವೆ.
ಶ್ರಾವಂಡನಹಳ್ಳಿಯಲ್ಲಿ ದೊರೆಯುವ ಮಾಸ್ತಿಗಲ್ಲು, ವೀರಗಲ್ಲುಗಳು ಮತ್ತು ದೇವಾಲಯದಲ್ಲಿನ ವಾಸ್ತುವನ್ನು ಪರಿಶೀಲಿಸಿದಾಗ ಈ ಗ್ರಾಮ ನೊಳಂಬರ ಸಾಂಸ್ಕೃತಿಕ ಪರಂಪರೆಗೆ ಒಳಪಟ್ಟಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಮೈಸೂರು ಆರ್ಕಿಯಾಲಾಜಿಕಲ್ ವರದಿಯಲ್ಲಿ ಮತ್ತು ಪ್ರೊ.ಡಿ.ವಿ. ಪರಶಿವಮೂರ್ತಿ ಮತ್ತು ಡಿ.ಸಿದ್ದಲಿಂಗಯ್ಯ ಸಂಪಾದಕೀಯದಲ್ಲಿ ಪ್ರಕಟಗೊಂಡ ನೊಳಂಬರ ಶಾಸನಗಳು ಎಂಬ ಗ್ರಂಥದಲ್ಲಿ ಉಲ್ಲೇಖವಾಗಿರುವ ಅಂಶಗಳ ಬಗ್ಗೆಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ನಿವೃತ್ತ ಪ್ರಾಂತೀಯ ನಿರ್ದೇಶಕ ಡಾ.ಎಸ್.ವಿ.ವೆಂಕಟೇಶಯ್ಯ ಮಾಹಿತಿ ನೀಡಿದರು.
ನೊಳಂಬರ ಕಾಲದಲ್ಲಿ ಜೈನ ಧರ್ಮ ಪ್ರಮುಖವಾಗಿತ್ತು. ಅಂತೆಯೇ ಶ್ರಾವಂಡನಹಳ್ಳಿಯು ಅಂದಿನ ಶ್ರವಣರ ಹಳ್ಳಿಯಾಗಿತ್ತು. ಕಾಲಾನುಕ್ರಮದಲ್ಲಿ ಶ್ರವಣರಹಳ್ಳಿ ಇಂದು ಶ್ರಾವಂಡನಹಳ್ಳಿಯಾಗಿ ಕರೆಯಲ್ಪಟ್ಟಿದೆ ಎಂದು ಗ್ರಾಮದ ಹಿರಿಯರು, ಅರ್ಚಕರು ಮತ್ತು ನಿವೃತ್ತ ಮುಖ್ಯಶಿಕ್ಷಕ ಎಸ್.ಟಿ. ಶಿವರಾಮ್ ಮಾಹಿತಿ ನೀಡಿದರು.
ಗ್ರಾಮದ ಮಧ್ಯಭಾಗದ ಎತ್ತರದ ಪ್ರದೇಶದಲ್ಲಿರುವ ಸ್ಥಳವನ್ನು ಇಲ್ಲಿ ಕೋಟೆ ಎಂದು ಕರೆಯುತ್ತಾರೆ. ಇದು ಮಧುಗಿರಿಯ ಬಿಜವಾರದ ಪಾಳೇಗಾರರು ನಿರ್ಮಿಸಿದಂತೆ ಇಲ್ಲಿಯು ಉತ್ತರ ಮತ್ತು ದಕ್ಷಿಣ ಕಡೆಗಳಿಂದ ಪ್ರವೇಶದ್ವಾರವನ್ನು ಹೊಂದಿದೆ. ಕೋಟೆಯ ಸ್ಥಳದ ಕೆಳ ಭಾಗದಲ್ಲಿ ಪ್ರಾಚೀನ ಸಂಹಿತೆಯ ಅನುಸಾರ ಹಳ್ಳಿಯ ಇತರರ ಮನೆಗಳಿಂದ ಆವೃತವಾಗಿದೆ. ಗತವೈಭವವನ್ನು ಸಾರುವ ಈ ಶಿಲ್ಪಗಳ ರಕ್ಷಿಸಬೇಕಿದೆ. ಹೆಚ್ಚಿನ ಸಂಶೋದನೆಗಳ ಜತೆಗೆ ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನದ ಅಭಿವೃದ್ಧಿ ಆದ್ಯತೆಯಾಗಬೇಕು ಎನ್ನುವುದುಗ್ರಾಮಸ್ಥರು ಹಾಗೂ ಭಕ್ತರ ಒತ್ತಾಯ.