ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಣಿಗಾರಿಕೆ ಅವಾಂತರ: ಹೆಚ್ಚಿದ ವನ್ಯಜೀವಿ ಸಂಘರ್ಷ

Last Updated 2 ಫೆಬ್ರುವರಿ 2023, 13:41 IST
ಅಕ್ಷರ ಗಾತ್ರ

ತುಮಕೂರು: ಬೆಟ್ಟ, ಗುಡ್ಡಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಾಗಿ ಜಿಲ್ಲೆಯಲ್ಲಿ ಮಾನವ– ಪ್ರಾಣಿ ಸಂಘರ್ಷ ಹೆಚ್ಚಾಗಿದೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರತಿ ದಿನ ಕರಡಿ, ಚಿರತೆ ಇತರೆ ವನ್ಯಪ್ರಾಣಿಗಳು ದಾಳಿ ಮಾಡುತ್ತಿರುವುದಕ್ಕೆ ಅವುಗಳ ಆವಾಸ ಸ್ಥಳಗಳಾದ ಬೆಟ್ಟ, ಗುಡ್ಡಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಅವೈಜ್ಞಾನಿಕ ಕಲ್ಲುಗಣಿಗಾರಿಕೆ ನೇರ ಕಾರಣವಾಗಿದೆ. ಇದನ್ನು ನಿಯಂತ್ರಿಸದಿದ್ದರೆ ಮತ್ತಷ್ಟು ಅನಾಹುತ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ತುಮಕೂರು, ಕೊರಟಗೆರೆ, ಮಧುಗಿರಿ, ಪಾವಗಡ, ಕುಣಿಗಲ್ ತಾಲ್ಲೂಕಿನಲ್ಲಿ ಹೆಚ್ಚು ಬೆಟ್ಟ ಗುಡ್ಡಗಳು ಇವೆ. ಇವು ಚಿನ್ನದಂತಹ ಆದಾಯ ತರುವ ಕೇಂದ್ರಗಳಾಗಿವೆ. ರಾಜಕಾರಣಿಗಳು, ಬಲಾಢ್ಯರಿಗೆ, ಬಂಡವಾಳಗಾರರಿಗೆ ಜಿಲ್ಲೆಯ ಬೆಟ್ಟ ಗುಡ್ಡಗಳು ಬಂಡವಾಳ ತೊಡಗಿಸುವ ಕೇಂದ್ರಗಳಾಗಿವೆ. ಇಲ್ಲಿನ ಪರಿಸರ ಹಾಳು ಮಾಡಿ, ವನ್ಯಜೀವಿಗಳು, ಜನಸಾಮಾನ್ಯರ ಬದುಕನ್ನು ಒಕ್ಕಲೆಬ್ಬಿಸುವ ಹುನ್ನಾರ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಗಿಡ ಮರಗಳಿಂದ ಕೂಡಿದ ಬೆಟ್ಟ ಪ್ರದೇಶಗಳು ಚಿರತೆ, ಕರಡಿ, ಕಾಡು ಹಂದಿ, ಕಾಡು ಬೆಕ್ಕು, ಕಡವೆ, ಜಿಂಕೆ, ಮೊಲಗಳಿಗೆ ಆವಾಸ ಸ್ಥಾನಗಳಾಗಿದ್ದವು. ಜಿಲ್ಲೆ ಆನೆ ಕಾರಿಡಾರ್‌ಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಬನ್ನೇರುಘಟ್ಟ, ಬಂಡಿಪುರ ಅರಣ್ಯದಿಂದ ವಲಸೆ ಬರುತ್ತಿದ್ದ ಆನೆಗಳು ಗುಡ್ಡಗಳಲ್ಲಿ ತಂಗುತ್ತಿದ್ದವು. ಇಲ್ಲಿನ ವನ್ಯ ಪ್ರಾಣಿಗಳಲ್ಲಿ ಸಾಮರಸ್ಯವಿತ್ತು. ಈಗ ಎಲ್ಲವೂ ಹಾಳಾಗಿದೆ ಎಂದು ತಿಳಿಸಿದ್ದಾರೆ.

1995ರಲ್ಲಿ ಒಂದೆರಡಿದ್ದ ಕ್ವಾರಿಗಳು 2000ದ ವೇಳೆಗೆ ಗರಿಗೆದರಿದವು. ಗಣಿ, ಕಂದಾಯ, ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಕಲ್ಲು ಗಣಿ ನಡೆಸುವ ಪ್ರದೇಶವನ್ನು ವೀಕ್ಷಿಸದೆ, ನೈಜ ಸ್ಥಿತಿಗಳನ್ನು ತಿಳಿಯದೆ, ಮುಂದೆ ಆಗುವ ಅನಾಹುತಗಳ ವಿವೇಚನೆ ಇಲ್ಲದೆ ಪರವಾನಗಿ ನೀಡುತ್ತಿದ್ದಾರೆ. ತಾಲ್ಲೂಕಿನ ಅರೆಗುಜ್ಜನಹಳ್ಳಿ ಗ್ರಾ.ಪಂ ವ್ಯಾಪ್ತಿಯ ದುರ್ಗದಹಳ್ಳಿ ಸಮೀಪದ ಶೇಟುಪಾಳ್ಯದಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿರುವುದನ್ನು ಗಮನಿಸಿದರೆ ಅಧಿಕಾರಿಗಳ ದಂಧೆ ಅರ್ಥವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೇಟುಪಾಳ್ಯ ಪ್ರದೇಶ ಅಳಲೆ, ಪಚ್ಚಾಲೆ, ಮುತ್ತುಗ, ಆಲ, ಕಕ್ಕೆಮರ, ಮರಹಾಲೆ, ಅಂಕೋಲೆ, ಜಾಲಾರಿ, ಅರಿಶಿಣಬೂರುಗ, ಕಗ್ಗಲಿ, ಕಾಡುದ್ರಾಕ್ಷಿ ಇತ್ಯಾದಿ ನೂರಾರು ವರ್ಷಗಳ ಗಿಡ ಮರಗಳಿರುವ ಕುರುಚಲು ಕಾಡಾಗಿದೆ. ದೇವರಾಯನದುರ್ಗ ಸಂರಕ್ಷಿತ ಅರಣ್ಯ ಪ್ರದೇಶದ ಬಪರ್ ವಲಯದ ಮಧ್ಯದಲ್ಲಿದೆ. ಸುತ್ತಲೂ ಒಲತಿಕಲ್ಲುಬೆಟ್ಟ, ಯೋಗನರಸಿಂಹ ಸ್ವಾಮಿ ಬೆಟ್ಟ, ಚಿನ್ನಿಗಬೆಟ್ಟ, ಕದುರಪ್ಪನಬೆಟ್ಟ, ವಡ್ಡರಹಳ್ಳಿಬೆಟ್ಟ, ಸತ್ತಿಕಲ್ಲು ಬೆಟ್ಟಗಳಿವೆ. ನವಿಲು, ಮುಳ್ಳುಹಂದಿ, ಚಿಪ್ಪುಹಂದಿ, ಕಾಡುಹಂದಿ, ಚಿರತೆ, ಕರಡಿ, ಕಾಡು ಬೆಕ್ಕು ಇತರೆ ಪ್ರಾಣಿಗಳು ಓಡಾಡುವ ಮೊಗಶಾಲೆಯಾಗಿದೆ. ಜೀವವೈವಿಧ್ಯ ಸಮೃದ್ಧವಾಗಿರುವ ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಹೇಗೆ ಅವಕಾಶ ನೀಡಿದರು ಎಂಬುದೇ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಗಣಿಗಾರಿಕೆ ನಡೆಯುತ್ತಿರುವ 100 ಮೀಟರ್ ಸಮೀಪದಲ್ಲೇ ಇರುವ ಹಳ್ಳಿಯ ಜನಜೀವನದ ಮೇಲೆ ಗಂಭೀರ ಪರಿಣಾಮಗಳು ಬೀರುತ್ತಿವೆ. ದುರ್ಗದಹಳ್ಳಿ, ಅನುಪನಹಳ್ಳಿ, ತಿಮ್ಮನಾಯಕನಹಳ್ಳಿ, ಶೆಟ್ಟರಪಾಳ್ಯದಲ್ಲಿ ಮಾನವ– ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಕೊಟ್ಟಿರುವ ಅನುಮತಿಯನ್ನು ರದ್ದುಗೊಳಿಸಿ ಸೂಕ್ಷ್ಮ ಪ್ರದೇಶವನ್ನು ಸಂರಕ್ಷಿಸುವಂತೆ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT