ಕುಣಿಗಲ್: ತಾಲ್ಲೂಕಿನ ಕೊತ್ತೆಗೆರೆ ಹೋಬಳಿಯ ಜಾಣಗೆರೆ ಕೆರೆ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಗ್ರಾಮಸ್ಥರು ತಹಶೀಲ್ದಾರ್ ವಿಶ್ವನಾಥ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಸ್ಥ ಚಂದ್ರಪ್ಪ, ಪುರಾತನ ಇತಿಹಾಸವುಳ್ಳ ಜಾಣಗೆರೆ ಕೆರೆಯನ್ನು, ಕೆಲವರು ಪೂರ್ವಜರ ಆಸ್ತಿ ಎಂದು ಹೇಳಿಕೊಂಡು, ಅಕ್ರಮವಾಗಿ ದಾಖಲೆ ಸೃಷ್ಟಿಸಿ, ಕೆರೆಯ ಮಧ್ಯಭಾಗದಲ್ಲಿ ಬೇಲಿ ನಿರ್ಮಿಸಿಸಲು ಮುಂದಾಗಿದ್ದಾರೆ. ಕೆರೆಯ ಮಧ್ಯಭಾಗದಲ್ಲಿರುವ ಜಮೀನನ್ನು ಏಕಾಏಕಿ ದಾಖಲೆ ಸೃಷ್ಟಿಸಿ ವಶಕ್ಕೆ ಪಡೆಯಲು ಸಂಚು ನಡೆಯುತ್ತಿದೆ. ಅತಿಕ್ರಮಿಸಿರುವ ಮತ್ತು ಅಕ್ರಮ ದಾಖಲೆ ಸೃಷ್ಟಿಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಕೆರೆ ಸಂರಕ್ಷಣೆ ಮಾಡಬೇಕು ಎಂದರು.