ತುಮಕೂರು: ನಗರದ ಅಂತರಸನಹಳ್ಳಿ ಹಾಗೂ ಎಪಿಎಂಸಿ ಮಾರುಕಟ್ಟೆಗೆ ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ.ಸೋಮಶೇಖರ್ ಸೋಮವಾರ ಬೆಳಿಗ್ಗೆ ಭೇಟಿ ನೀಡಿದರು.
ಅಂತರಸನಹಳ್ಳಿಯಲ್ಲಿ ರೈತರು ಮಾರಾಟಕ್ಕೆ ತಂದಿದ್ದ ತರಕಾರಿ, ಹಣ್ಣುಗಳ ಬೆಲೆಗಳ ಬಗ್ಗೆ ಮಾಹಿತಿ ಪಡೆದರು. ಖರೀದಿಗೆ ಬರುವ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಹೇಳಿ ಎಂದು ವ್ಯಾಪಾರಿಗಳಿಗೆ ಕಿವಿ ಮಾತು ಹೇಳಿದರು.
ಸರಕುಗಳನ್ನು ಮಾರುಕಟ್ಟೆಗೆ ತರಲು ಯಾವುದೇ ರೀತಿಯಲ್ಲಿ ಅಡ್ಡಿಯಾದರೆ ಸಂಬಂಧಿಸಿದ ಅಧಿಕಾರಿಗಳು ಇಲ್ಲವೇ ತೋಟಗಾರಿಕೆ ಇಲಾಖೆ ನೋಡಲ್ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದರು.
ಹುಣಸೆ ಹಣ್ಣಿನ ಬೆಲೆ ಕುಸಿದಿರುವ ಬಗ್ಗೆ ಎಪಿಎಂಸಿಯಲ್ಲಿ ವ್ಯಾಪಾರಿಗಳು ಗಮನ ಸೆಳೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನೆನ್ನೆ ಪ್ರಜಾವಾಣಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಹಲವು ರೈತರು ಸಮಸ್ಯೆಗಳ ಪರಿಹಾರದ ವಿಚಾರವಾಗಿ ಗಮನ ಸೆಳೆದಿದ್ದಾರೆ. ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಮಾರುಕಟ್ಟೆಗಳಲ್ಲಿ ರೈತರಿಗೆ ತೊಂದರೆ ಆಗುತ್ತಿದೆಯೇ, ಮತ್ತೆ ಏನು ಸೌಲಭ್ಯ ಕಲ್ಪಿಸಬೇಕು ಎನ್ನುವ ಕಾರಣದಿಂದ ವಿವಿಧ ಮಾರುಕಟ್ಟೆಗಳಿಗೆ ಭೇಟಿ ನೀಡುತ್ತಿದ್ದೇನೆ. ಬಹುತೇಕ ಎಪಿಎಂಸಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಚೆಕ್ ಪೋಸ್ಟ್ಗಳಲ್ಲಿ ರೈತರು ಸರಕುಗಳನ್ನು ಕೊಂಡೊಯ್ಯಲು ಅಡ್ಡಿ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ.
ನೆನ್ನೆ ಬೆಂಗಳೂರಿನಲ್ಲಿ ಕೆ.ಜಿ. ಟೊಮೆಟೊ ₹ 2 ಇತ್ತು. ತುಮಕೂರು ಮಾರುಕಟ್ಟೆಯಲ್ಲಿ ₹ 8ರಿಂದ 10 ಇದೆ. ಪಾವಗಡದಿಂದ ತುಮಕೂರಿಗೆ ರೈತರು ತರಕಾರಿ ತರುವಾಗ ಆಂಧ್ರಪ್ರದೇಶದ ಮಡಕಶಿರಾ ಪೊಲೀಸರು ತಡೆಯುತ್ತಿಲ್ಲ.
ರೈತರ ಉತ್ಪನ್ನ ಸಾಕಾಣಿಕೆ ವಿಚಾರದಲ್ಲಿ ಯಾವುದೇ ರೀತಿಯ ದೂರುಗಳು ಬಂದ ತಕ್ಷಣ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಮಾಹಿತಿ ನೀಡಿದರು.