ಮಧುಗಿರಿ: ರಾಜ್ಯದಲ್ಲಿ ಕಳೆದ ವರ್ಷದ ಪ್ರವಾಹದಿಂದಾಗಿ ₹35 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಉಪ ಮುಖ್ಯಮಂತ್ರಿ ಎಂ.ಗೋವಿಂದ ಕಾರಜೋಳ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹದಿಂದ ಸೇತುವೆ, ರಸ್ತೆ, ಕೆರೆ, ಮನೆ ಸೇರಿದಂತೆ ಅಪಾರ ನಷ್ಟ ಉಂಟಾಯಿತು. ಬಳಿಕ ಸೇತುವೆ, ರಸ್ತೆ ಹಾಗೂ ಹಲವು ಕಾಮಗಾರಿಗಳನ್ನು ₹750 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಯಿತು. ಆದರೆ, ಲಾಕ್ಡೌನ್ನಿಂದ ಕಾಮಗಾರಿಗಳ ಕೆಲಸ ಸ್ಥಗಿತಗೊಂಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎಲ್ಲ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ತಡೆ ಹಿಡಿದಿದ್ದ ಕಾಮಗಾರಿಯನ್ನು ಮುಂದುವೆರಿಸಲಾಗುವುದು ಎಂದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರಕ್ಕೆ ಮಂಜೂರಾಗಿದ್ದ ₹22 ಕೋಟಿ ವೆಚ್ಚದ ಕಾಮಗಾರಿಯನ್ನು ಬಿಜೆಪಿ ಸರ್ಕಾರ ತಡೆಯೊಡ್ಡಿದೆ. ತಕ್ಷಣ ಈ ವಿಶೇಷ ಅನುದಾನವನ್ನು ಬಿಡುಗಡೆ ಮಾಡ ಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಮುಖ್ಯಾಧಿಕಾರಿ ಅಮರನಾರಾಯಣ, ಜಿ.ಪಂ ಸದಸ್ಯ ಎಚ್.ಕೆಂಚಮಾರಯ್ಯ, ಪುರಸಭೆ ಸದಸ್ಯರಾದ ಎಂ.ಎಸ್.ಚಂದ್ರಶೇಖರ್ ಬಾಬು, ಎಂ.ಎಲ್.ಗಂಗರಾಜು,ಎಂ.ಆರ್.ಜಗನ್ನಾಥ್, ಕೆ.ನಾರಾಯಣ, ನರಸಿಂಹಮೂರ್ತಿ, ಪಿ.ಎಲ್.ನರಸಿಂಹ ಮೂರ್ತಿ, ಡಾ.ಲಕ್ಷ್ಮಿಕಾಂತ ಇದ್ದರು.